ಶನಿವಾರ, ಸೆಪ್ಟೆಂಬರ್ 2, 2017

ಭಾರತದ ಬೌದ್ಧಿಕ ದಾರಿದ್ರ್ಯ ಮತ್ತು ಬುದ್ಧನೆಂಬ ತಥಾಗತನ ನೆನಪುಗಳು


ಕಳೆದ ಶುಕ್ರವಾರ ಹರ್ಯಾಣದ ಸಿರ್ಸಾ ಎಂಬ ಪಟ್ಟಣದಲ್ಲಿ ನಕಲಿ ದೇವಮಾನವನೊಬ್ಬನ ( ಗುರ್ ಮಿತ್  ರಾಮ್ ರಹೀಮ್)  ನಡುವಳಿಕೆಗೆ ಅಲ್ಲಿನ ಸಿ.ಬಿ.ಐ. ವಿಶೇಷ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿ ಇಪ್ಪತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಈ ಹಿನ್ನಲೆಯಲ್ಲಿ ಢೇರಾ ಸಚ್ಚ ಎಂಬ ಪಂಥದ ಅನುಯಾಯಿಗಳು ಪಂಜಾಬ್,  ಹರ್ಯಾಣ,, ದೆಹಲಿ ನಗರ ಸೇರಿದಂತೆ ಉತ್ತರ ಪ್ರದೇಶದ ಹಲವೆಡೆ ನಡೆಸಿದ ಹಿಂಸಾಚಾರ ಮತ್ತು ಇದರಿಂದಾದ ಸಾರ್ವಜನಿಕ ಆಸ್ತಿಯ ನಷ್ಟ ಇವುಗಳನ್ನು ಅವಲೋಕಿಸಿದರೆ ಭಾರತದ ನಾಗರೀಕ ಸಮಾಜವು ತಲೆ ತಗ್ಗಿಸುವಂತಿದೆ.  
ಆರ್ಥಿಕವಾಗಿ ಬೆಳೆಯುತ್ತಿರುವ ಜಗತ್ತಿನ ಅತಿ ದೊಡ್ಡ ರಾಷ್ಟ್ರ ಎನಿಸಿರುವ ಭಾರತದಲ್ಲಿ ತಾಂಡವಾಡುತ್ತಿರುವ ಭೌತಿಕ ಬಡತನ ಮತ್ತು ಭೌದ್ಧಿಕ ಬಡತನ ಈ ಎರಡೂ ಅಂಶಗಳು ಭಾರತದ ಪಾಲಿಗೆ ಶತೃಗಳಾಗಿವೆ. ನಮ್ಮಲ್ಲಿ ಜನರ ಭೌತಿಕ ಬಡತನವನ್ನು ಹೋಗಲಾಡಿಸಲು, ಹಲವಾರು ಯೋಜನೆಗಳಿವೆ, ಶಿಕ್ಷಣ, ಆರೋಗ್ಯ, ವಸತಿ ಮತ್ತು  ಕೈಗೆಟುಕುವ ದರದಲ್ಲಿ ಪಡಿತರ, ದುಡಿಯುವ ಕೈಗಳಿಗೆ ಉದ್ಯೋಗ ಇತ್ಯಾದಿ ಯೋಜನೆಗಳು  ಹೀಗೆ ಜನರನ್ನು ಬಡತನದ ರೇಖೆಯ ಕೆಳಗಿನಿಂದ ಮೇಲೆತ್ತಲು ಹಲವು ಮಾರ್ಗಗಳಿವೆ. ಆದರೆ, ಧರ್ಮ, ಮೂಡ ನಂಬಿಕೆ ಹಾಗೂ ಕುರುಡು ಆರಾಧನೆ, ಜಾತಿ ಮತ್ತು ಜಾತಿ ಸಂಘಟನೆಗಳ ಪೋಷಣೆಯ ಜೊತೆಗೆ ಭಾರತದ ಆಧ್ಯಾತ್ಮವನ್ನು ಮಾರಾಟದ ಸರಕನ್ನಾಗಿ ಮಾಡಿಕೊಂಡಿರುವ ನಕಲಿ ದೇವಮಾನವರು, ಬೂದಿ ಬಾಬಾಗಳು,  ಮಠಾಧೀಶರು, ಆಶ್ರಮವೆಂಬ ಐಷಾರಾಮಿ ಬಂಗಲೆಗಳಲ್ಲಿ ಹವಾನಿಯಂತ್ರಣ ಕೊಠಡಿಗಳಲ್ಲಿ ಬದುಕುತ್ತಿರುವ ಲಜ್ಜೆಗೆಟ್ಟ ಸ್ವಾಮೀಜಿಗಳು ಹಾಗೂ ಇವರ ಗುಲಾಮರಂತೆ ಬದುಕುತ್ತಿರುವ ಭಕ್ತರೆಂಬ ಮತಿಗೆಟ್ಟ ಮನುಷ್ಯರು ಇಂತಹವರ ಬೌದ್ಧಿಕ ಬಡತನಕ್ಕೆ ಈ ದೇಶದಲ್ಲಿ ಮಾತ್ರವಲ್ಲ, ಈ ಜಗತ್ತಿನಲ್ಲಿ ಯಾವುದೇ ಮದ್ದಿಲ್ಲ ಎಂಬುದನ್ನು ಕಳೆದವಾರದ  ಹಿಂಸಾಚಾರದ ಘಟನೆ ನಮಗೆ ತೋರಿಸಿಕೊಟ್ಟಿದೆ.
ಉತ್ತರ ಮತ್ತು ದಕ್ಷಿಣ ಭಾರತವೆಂಬ ಬೇಧ ಭಾವವಿಲ್ಲದೆ, ಅನೇಕ ಸ್ವಾಮೀಜಿಗಳು. ಮತ್ತು ದೇವಮಾನವರೆಂಬ ಅತ್ಯಾಚಾರಿಗಳು, ಕೊಲೆಗಡುಕರು ಮತ್ತು ಸರ್ಕಾರಿ ಭೂಮಿಯನ್ನು ನುಂಗಿ ನೀರು ಕುಡಿವ ಕ್ರಿಮಿನಲ್‍ಗಳ ಹೀನ ಇತಿಹಾಸ ಒಂದೊಂದಾಗಿ ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ.  ಹರ್ರ್ಯಾಣದ ಗುರ್‍ಮೀತ್ ರಾಮ್‍ರಹಿಮ್ ಸಿಂಣ್ ತಾನು ಸ್ಥಾಪಿಸಿದ ಢೇರಾ ಸಚ್ಛ ಸೌದ ಎಂಬ ಧಾರ್ಮಿಕ ಪಚಿಥದ ಸಂಘಟನೆಯ ಹೆಸರಿನಲ್ಲಿ ಕಳೆದ 25 ವರ್ಷಗಳಿಂದ ಅವನು ನಡೆಸಿರುವ ಸ್ವೇಚ್ಛಾಚಾರದ ಬದುಕು, ಅತ್ಯಾಚಾರ, ಕೊಲೆ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ. ಅವನ ವೇಷ ಭೂಷಣ, ಅವನ ಸಿನಿಮಾ ಹುಚ್ಚು, ನೂರಾರು ವಿದೇಶಿ ಐಷಾರಾಮಿ ಕಾರುಗಳ ಮೋಹ ಇವೆಲ್ಲವನ್ನೂ  ಕಣ್ಣಾರೆ ನೋಡಿಯೂ ಸಹ ಅವನನ್ನು ದೇವರು ಎಂದು ಆರಾಧಿಸುತ್ತಿರುವ ಜನರ ನಂಬಿಕೆಯನ್ನು ಭೌದ್ಧಿಕ ದಾರಿದ್ರ್ಯ ಎಂದು ಕರೆಯದೇ ಇರಲು ಸಾಧ್ಯವಿಲ್ಲ. 
ಈ ದೇಶದ ರಾಜಕಾರಣಿಗಳು ಓಟಿಗಾಗಿ, ಓಲೈಕೆಯ ರಾಜಕಾರಣದಲ್ಲಿ ತೊಡಗಿ ಇಂತಹ ನಕಲಿ ಅವತಾರ ಪುರುಷರ ಕಾಲಿಗೆರೆಗಿ ತಮ್ಮ ತನುಮನುದ ಜೊತೆಗೆ ಪಕ್ಷವನ್ನು ಇಂತಹವರ ಪದತಲದಲ್ಲಿ ಇರಿಸಿದ್ದರ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಅರ್ಧಶತಮಾನದ ಹಿಂದೆ ಈ ದೇಶದ ಸಾಕ್ಷಿ ಪ್ರಜ್ಞೆ ಎಂಬಂತೆ ಇದ್ದ ಡಾ.ರಾಮ ಮನೋಹರ ಲೋಹಿಯಾ ಅವರು, ದೇಶದ ಪ್ರಥಮ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ರವರು ಯಾವುದೋ ಒಬ್ಬ ಸ್ವಾಮೀಜಿಯ ಕಾಲು ತೊಳೆದು ಪಾದ ಪೂಜೆ ಮಾಡಿದ ಸಂದರ್ಭದಲ್ಲಿ ನೇರವಾಗಿ ಛಾಟಿ ಏಟು ಬೀಸಿದ್ದರು. “ ನೀವು ಬಾಬುರಾಜೇಂದ್ರ ಪ್ರಸಾದ್ ಆಗಿ ಧರ್ಮ ಮತ್ತು ನಂಬಿಕೆ ಕುರಿತಾದ ಆಚರಣೆಗಳನ್ನು  ನಿಮ್ಮ ನಿವಾಸದ ನಾಲ್ಕು ಗೊಡೆಯ ಮಧ್ಯಕ್ಕೆ ಸೀಮಿತಗೊಳಿಸಿ, ಒಂದು ಜಾತ್ಯಾತೀತ, ಧರ್ಮಾತೀತ ಪ್ರಜಾಪ್ರಭುತ್ವದ ರಾಷ್ಟ್ರವೊಂದರ ಪ್ರಥಮ ಪ್ರಜೆಯಾಗಿ ನೀವು ಯಾವುದೇ ಸ್ವಾಮೀಜಿಯ ಕಾಲು ಮುಟ್ಟುವುದು ನಾಗರೀಕ ಸಮಾಜಕ್ಕೆ ಮಾಡುವ ಅವಮಾನ” ಎನ್ನುವ ಹಾಗೆ ಎಲ್ಲಾ ರಾಜಕೀಯ ಪಕ್ಷ ಮತ್ತು ನಾಯಕರ ಎದೆಗೆ ತಾಕುವ ಹಾಗೆ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದರು. ಧರ್ಮದಲ್ಲಿ ರಾಜಕಾರಣವನ್ನು ಅಥವಾ ರಾಜಕೀಯದಲ್ಲಿ ಧರ್ಮವನ್ನು ಬೆರಸಬಾರದು ಎಂಬುದು ಗಾಂಧಿ, ಲೋಹಿಯಾ, ಜೆ.ಪಿ. ಮತ್ತು ಅಂಬೇಡ್ಕರ್ ಹೀಗೆ ಅನೇಕ ಮಹನೀಯರ ಆಶಯವಾಗಿತ್ತು.
ರಾಮಮನೋಹರ ಲೋಹಿಯಾ ಅವರ ಎಚ್ಚರಿಕೆಯ ನಡುವೆಯೂ ಸಹ ರಾಜಕಾರಣಿಗಳು ಇಂತಹ ನಕಲಿ ದೇವಮಾನವರ ಸಹವಾಸ ಬೆಳೆಸಿಕೊಂಡು ಬಂದರು. ಅಧಿಕಾರಸ್ತ ರಾಜಕಾರಣಿಗಳ ನೆರವಿನಿಂದ ಎಲ್ಲಾ ಅವತಾರ ಪುರುಷರೆಂಬ ನಕಲಿ ದೇವ ಮಾನವರು ತಮ್ಮ ಸಾಮ್ರಾಜ್ಯದ ಕೋಟೆಯನ್ನು ವಿಸ್ತರಿಸುತ್ತಾ ಬಂದರು. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಧಿರೇಂದ್ರ ಬ್ರಹ್ಮಚಾರಿ, ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಚಂದ್ರಸ್ವಾಮಿಯವರಿಂದ ಹಿಡಿದು ಈಗಿನ ಪ್ರಧಾನಿ ನರೇಂದ್ರಮೋದಿಯವರ ಸಹವಾಸದಲ್ಲಿ ಬಾಬಾ ರಾಮದೇವ್, ಜಗ್ಗಿವಾಸುದೇವ್, ರವಿಶಂಕರ್ ಇವೆರೆಲ್ಲರೂ ಸ್ಟಾರ್ ನಟರಂತೆ ಸಧ್ಯದ ಭಾರತದಲ್ಲಿ ಸ್ಟಾರ್ ದೇವ ಮಾನವರಾಗಿದ್ದಾರೆ. ಇವರಿಗೆ ಅಂಟಿಕೊಡಿರುವ ಕಳಂಕಗಳು ಅಥವಾ ಆರೋಪಗಳು ಒಂದೆರೆಡಲ್ಲ.  ಭಾರತದ ಆಧ್ಯಾತ್ಮವನ್ನು, ಯೋಗವನ್ನು, ಧ್ಯಾನವನ್ನು ಮತ್ತು ಪಾರಂಪರಿಕ ಔಷಧ ಕುರಿತು ಜ್ಞಾನವನ್ನು ಬಂಡವಾಳ ಮಾಡಿಕೊಂಡು, ಬಹುರಾಷ್ಟ್ರೀಯ ಕಂಪನಿಗಳ ಮಾದರಿಯಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಿದ್ದಾರೆ. ಇಂತಹವರ ಕಾಲಿಗೆರೆಗಿ, ಆಶ್ರಮಕ್ಕೆ ಭೇಟಿ ನೀಡಿ ಕುಮ್ಮಕ್ಕು ನೀಡುತ್ತಿರುವ ರಾಜಕಾರಣಿಗಳು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳಬೇಕಿದೆ. ವಚನಕಾರ ಅಲ್ಲಮ ಪ್ರಭು “ ಮಠವೇಕೋ? ಮಂದಿರವೇಕೋ? ಚಿತ್ತ ಸಮಾಧಾನವುಳ್ಳ ಶರಣಂಗೆ” ಎಂದು ಹನ್ನೆರೆಡನೆಯ ಶತಮಾನದಲ್ಲಿ ಪ್ರಶ್ನಿಸಿದ ಮಾತನ್ನು ನಾವು ನೆನಪಿಸಿಕೊಳ್ಳಬೇಕಿದೆ. ಇದೇ ಮಾತನ್ನು ಎರಡೂವರೆ ಸಾವಿರದ ವರ್ಷಗಳ ಹಿಂದೆ ಗೌತಮ ಬುದ್ಧನು “ ನಾವು ಒಳಗಿನಿಂದ ಅಂದರೆ, ನಮ್ಮೊಳಗಿನ ಜ್ಞಾನ ಮತ್ತು ವಿವೇಕದಿಂದ ಆಳಿಸಿಕೊಳ್ಳಬೇಕೇ ಹೊರತು, ಬಾಹ್ಯ ಶಕ್ತಿಗಳಿಂದ ಅಲ್ಲ” ಎಂದಿದ್ದನು. ಬಾಹ್ಯ ಶಕ್ತಿಗಳು ಅಂದರೆ, ಅಪೌರುಷೇಯ ಎನ್ನಲಾದ ವೇದಗಳು ಮತ್ತು  ಅವುಗಳ ಆಚರಣೆಗಳಿಂದ ಅಲ್ಲ ಎನ್ನುವುದರ ಮೂಲಕ ಎಲ್ಲಾ ರೀತಿಯ ಮೌಡ್ಯಗಳನ್ನು ಧಿಕ್ಕರಿಸಿ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಬುದ್ಧನ ವಿವೇಕ ಮತ್ತು ಜ್ಞಾನ ನಮಗೀಗ ಅತ್ಯವಶ್ಯಕವಾಗಿದೆ.

ಈ ದಿನಗಳಲ್ಲಿ  ಸನ್ಯಾಸಿಗಳೆಂಬ ವೇಷ ತೊಟ್ಟವರು ಸನ್ಯಾಸತ್ವ ಎಂದರೆ ಏನು ಎಂಬುದನ್ನು ಗೌತಮ ಬುದ್ಧನನ್ನು ನೋಡಿ ಅಥವಾ ಅವನನ್ನು ಓದಿ ಕಲಿತುಕೊಳ್ಳಬೇಕು. ಬುದ್ಧ ಧರಿಸುತ್ತಿದ್ದ ಕಾಷಾಯ ವಸ್ತ್ರಗಳು, ತಿಪ್ಪೆಯ ಮೇಲೆ ಬಿಸಾಡಿದ ಚಿಂದಿ ಬಟ್ಟೆಗಳು ಮತ್ತು ಶವದ ಮೇಲಿನ ಬಟ್ಟೆಗಳಿಂದ ಹೊಲಿದ ವಸû್ರಗಳಾಗಿರುತ್ತಿದ್ದವು. ಸನ್ಯಾಸಿಯಾದವನು ಮೂರು ಬಗೆಯ ವಸ್ತ್ರಗಳನ್ನು ಧರಿಸಬೇಕಿತ್ತು. ಅವುಗಳೆಂದರೆ, ಅಂತರ ವಸ್ತ್ರ ಎಂಬ ಒಳ ಉಡುಪು, ಉತ್ತರ ಸಂಗ ಎಂಬ ಹೊರ ಉಡುಪು ಮತ್ತು ಸಂಗತಿ ಎನ್ನುವ ಚಳಿಯಿಂದ ರಕ್ಷಿಸುವ ಉಡುಪು. ಇವುಗಳಲ್ಲಿ ಸನ್ಯಾಸಿಯಾದವನ ಜೊತೆ ಇವುಗಳು ಹೊರತು ಪಡಿಸಿದರೆ ಬೇರೇ ಏನೂ ಇರಕೂಡದು. ಭಿಕ್ಷಾ ಪಾತ್ರೆ, ಸೂಜಿ, ಕ್ಷೌರದ ಕತ್ತಿ ಮತ್ತು ಲಂಗೋಟಿ ಹಾಗೂ ಕಮಂಡಲ ಇವುಗಳಲ್ಲದೆ ಬೇರೇನೂ ಇರುವಂತಿರಲಿಲ್ಲ. ಸ್ವತಃ ಬುದ್ಧನು ಅನುಸರಿಸಿದ ಮಾರ್ಗವಿದು. ಪ್ರತಿದಿನ ಬೆಳಿಗ್ಗೆ ಭಿಕ್ಷೆ ಬೇಡಿ ಪೂವಾಹ್ನಕ್ಕೆ ಮುನ್ನ ಅಂದರೆ ಮಧ್ಯಾಹ್ನಕ್ಕೆ ಮುನ್ನ ಒಮ್ಮೆ ಮಾತ್ರ ಊಟ ಮಾಡಬೇಕು. ವಿಹಾರಗಳು ಅಥವಾ ವಿಹಾರಗಳು ಇಲ್ಲದಿದ್ದರೆ, ಮರದ ಕೆಳೆಗೆ ವಾಸಿಸಬೇಕು ಎಂಬ ನಿಯಮವನ್ನು ವಿಧಿಸಿ ಅದನ್ನು ಸ್ವತಃ ಪಾಲಿಸುತ್ತಿದ್ದನು. ಯಾವ ಕಾರಣಕ್ಕೂ ಸನ್ಯಾಸಿಯಾದವನು ಆಸ್ತಿ ಮಾಡದಂತೆ ನಿಯಮ ರೂಪಿಸಿದ್ದನು. ನಂತರ ದಿನಗಳಲ್ಲಿ ಭಿಕ್ಕುಗಳ ಸಂಘಕ್ಕೆ ಉಡುಗೊರೆ ನೀಡಿದರೆ ಮಾತ್ರ ಭೂಮಿ ಮತ್ತು ಸಂಚಾರಿ ಸನ್ಯಾಸಿಗಳ ಆಶ್ರಯಕ್ಕಾಗಿ ನಿರ್ಮಿಸಿದ ವಿಹಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದನು. ಇವೊತ್ತಿನ ಸನ್ಯಾಸಿಗಳೆಂಬ ದೇವಮಾನವರಿಗೂ ಮತ್ತು ಅಂದಿನ ತಥಾಗತ ಬುದ್ಧನಿಗೂ ಹೋಲಿಸಿ ನೋಡಿದಾಗ, ಈಗಿನವರು ಯಾವರೀತಿಯಲ್ಲಿ ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ದಿವಾಳಿ ಎದ್ದು ಹೋಗಿದ್ದಾರೆ ಎಂಬುದು ನಮಗೆ ಮನದಟ್ಟಾಗುತ್ತದೆ.
ಗೌತಮ ಬುದ್ಧನು ಪರಿವ್ರಾಜಕನಾದ ( ಸನ್ಯಾಸಿ) ನಂತರ ತನ್ನ ಅಸಂಖ್ಯಾತ ಭಿಕ್ಕು ಅನುಯಾಯಿಗಳ ಜೊತೆ ತಾನು ಹುಟ್ಟಿ ಬೆಳೆದ ಕಪಿಲವಸ್ತು ನಗರಕ್ಕೆ ಭೇಟಿ ನೀಡಿ ಅಲ್ಲಿನ ಊರಾಚೆಗಿನ ಮಾವಿನ ಮರದ ತೋಟದಲ್ಲಿ ತಂಗಿದ್ದನು. ತನ್ನ ಮಲತಾಯಿ ಪ್ರಜಾಪತಿ ಗೌತಮಿಯು ತನ್ನ ಪುತ್ರ ಗೌತಮ ಬುದ್ಧನಿಗಾಗಿ ಮೂರು ತಿಂಗಳು ಕುಳಿತು ಕೈಯಾರೆ ನೇಯ್ದ ಹತ್ತಿಯ ವಸû್ರಗಳನ್ನು ಮಗನಿಗೆ ಉಡುಗೊರೆಯಾಗಿ ಕೊಡಲು ಹೋದಾಗ, ಅದನ್ನು ನಿರಾಕರಿಸಿದನು. ಕೊನೆಗೆ ತನ್ನ ಅನುಯಾಯಿ ಆನಂದನ ಸಲಹೆ ಮೇರೆಗೆ ತನಗೆ ಬದಲಾಗಿ ಭಿಕ್ಕುಗಳ ಸಂಘಕ್ಕೆ ಉಡುಗೊರೆಯಾಗಿ ಸ್ವೀಕರಿಸಿದನು. ಇಂತಹ ಆತ್ಮಶಕ್ತಿಯನ್ನು ಇಂದಿನ ಭಾರತದ ಅವತಾರ ಪುರುಷರೆಂಬ ನಕಲಿ ದೇವಮಾನವರಲ್ಲಿ ಮತ್ತು ವಿರಕ್ತರೆಂಬ ಹಣೆಪಟ್ಟಿ ಹೊತ್ತ ಮಠಾಧೀಶರಲ್ಲಿ ನಾವು ಹುಡುಕಲು ಸಾಧ್ಯವೆ? ಧರ್ಮ ಮತ್ತು ಆಧ್ಯಾತ್ಮಗಳೆರೆಡೂ ಅಮಲೇರಿಸುವ ಮಾದಕ ವಸ್ತುಗಳಂತೆ ಪರಿವರ್ತನೆ ಹೊಂದಿರುವ ಇಂದಿನ ಭಾರತದಲ್ಲಿ ಎಲ್ಲರೂ ಉನ್ಮಾದದ ಅಲೆಯಲ್ಲಿ ತೇಲತೊಡಗಿದ್ದಾರೆ.
(ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣಬರಹ)


ಶುಕ್ರವಾರ, ಆಗಸ್ಟ್ 25, 2017

ದ್ವೇಷದ ರಾಜಕಾರಣಕ್ಕೆ ಬಲಿಯಾಗುತ್ತಿರುವ ವ್ಯಕ್ತಿತ್ವದ ಘನತೆ ಮತ್ತು ನೈತಿಕತೆ



ಇದು ಭಾರತದ ರಾಜಕಾರಣದ ದುರಂತ ಮಾತ್ರವಲ್ಲ, ಕರ್ನಾಟಕದ ರಾಜಕಾರಣದ ದುರಂತವೂ ಸಹ ಹೌದು. ರಾಜಕೀಯ ಪಕ್ಷಗಳ ಹಾಗೂ ರಾಜಕೀಯ ನೇತಾರರ ನಡುವೆ ಇರಬೇಕಾದ ಸೈದ್ಧಾಂತಿಕ ಭಿನ್ನಭಿಪ್ರಾಯ ಅಥವಾ ವೈಚಾರಿಕ ಸಂಘರ್ಷಗಳು ವೈಯಕ್ತಿಕ ಹಿತಾಸಕ್ತಿಯ  ಮಟ್ಟಕ್ಕೆ ಇಳಿಯುವುದರ ಮೂಲಕ ವ್ಯಕ್ತಿ ಚಾರಿತ್ರ್ಯದ ಹರಣ ರಾಜಾ ರೋಷವಾಗಿ ಮುಂದುವರಿದಿದೆ.
ಒಂದು ರಾಜಕೀಯ ಪಕ್ಷ ಅಥವಾ ಒಬ್ಬ ನಾಯಕನನ್ನು ಮಣಿಸಲು ಈಗ ರಾಜಕೀಯ ನಾಯಕನೊಬ್ಬ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರಬಹುದಾದ ಹಗರಣಗಳನ್ನು ಅವನ ವಿರುದ್ಧ ಆಯುಧಗಳನ್ನಾಗಿ ಬಳಕೆ ಮಾಡಲಾಗುತ್ತಿದೆ. ಯಾವ ಕ್ಷಣದಲ್ಲಿ ಯಾರೊಬ್ಬರ ಆರೋಪಗಳು ಅಥವಾ ಯಾವ ತನಿಖಾ ವರದಿಗಳು ಮುಂಚೂಣಿಗೆ ಬರುತ್ತವೆ ಎಂಬುದನ್ನು ಯಾರೂ ನಿರೀಕ್ಷಿಸಲಾಗದ ರೀತಿಯಲ್ಲಿ ಕ್ಷಿಪ್ರಗತಿಯಲ್ಲಿ ಎದ್ದು ನಿಲ್ಲುತ್ತಿವೆ. ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಇತ್ಯಾದಿಗಳ ತನಿಖೆಗಾಗಿ ಇರುವ ಕೇಂದ್ರದ ಸಿ.ಬಿ..ಸಂಸ್ಥೆ ಮತ್ತು ರಾಜ್ಯಮಟ್ಟದ .ಸಿ.ಬಿ. ಸಂಸ್ಥೆಗಳು ಆಳುವ ಸರ್ಕಾರಗಳ ಕೈಗೊಂಬೆಗಳಾಗಿವೆ. ಜೊತೆಗೆ ಸಂಸ್ಥೆಗಳು ನೀಡುವ ತನಿಖಾ ವರದಿಗಳಿಗಳಾಗಲಿ ಅಥವಾ ಸರ್ಕಾರ ನೇಮಿಸುವ ತನಿಖಾ ಆಯೋಗದ ವರದಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ಜನತೆಯ ವಿಶ್ವಾಸವನ್ನು ಕಳೆದುಕೊಂಡು ಎಷ್ಟೋ ದಶಕಗಳು ಉರುಳಿ ಹೋದವು.
1975 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿ ಹಾಗೂ ಅವಧಿಯಲ್ಲಿ ನಡೆಯಿತು ಎನ್ನಲಾದ ದೌರ್ಜನ್ಯಗಳು ಮತ್ತು ಅಧಿಕಾರ ದುರುಪಯೋಗ ಸ್ಭೆರಿದಂತೆ ಹಲವು ಪ್ರಕರಣಗಳಿಗೆ ನಂತರ ಬಂದ ಜನತಾ ಸರ್ಕಾರ ನೇಮಿಸಿದ  ಷಾ ಆಯೋಗದಿಂದ ಹಿಡಿದು, ಕರ್ನಾಟಕದ ದೇವರಾಜ ಅರಸು ವಿರುದ್ಧ ನೇಮಿಸಿದ ಗ್ರೋವರ್ ಆಯೋಗದವರೆಗೆ ಮುಂದುವರಿದು ನಂತರ ಇಂದಿನ ನ್ಯಾಯಮೂರ್ತಿ ಕೆಂಪಣ್ಣ ಆಯೋಗದವರೆಗೆ ಪರಾಮರ್ಶಿಸಿದರೆ, ಇದೊಂದು ರಾಜಕೀಯ ರಂಗದ ಕಣ್ಣ ಮುಚ್ಚಾಲೆಯ ಆಟ ಎನ್ನದೆ ವಿಧಿಯಿಲ್ಲ. ದೇಶದ ಇತಿಹಾಸದಲ್ಲಿ ಹರಿಯಾಣದ ಮಾಜಿ ಮುಖ್ಯ ಮಂತ್ರಿ ಚೌತಾಲ, ಬಿಹಾರದ ಲಾಲುಪ್ರಸಾದ್ ಯಾದವ್, ತಮಿಳುನಾಡಿನ ಜಯಲಲಿತಾ ಹೀಗೆ ಕೆಲವರನ್ನು ಹೊರತು ಪಡಿಸಿದರೆ, ಉಳಿದ ರಾಜಕಾರಣಿಗಳು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ಉದಾಹರಣೆಗಳು ತೀರಾ ಕಡಿಮೆ ಎಂದು ಹೇಳಬೇಕು.
ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹಲವಾರು ವಿಲಕ್ಷಣ ಸಂಗತಿಗಳಿಗೆ ಸಾಕ್ಷಿಯಾಗುತ್ತಿವೆ. ಗುಜರಾತಿನ  ಕಾಂಗ್ರೇಸ್ ಶಾಸಕರಿಗೆ ಆತಿಥ್ಯ ನೀಡಿದರು ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೇಸ್ ಸರ್ಕಾರದ ಪ್ರಭಾವಿ ಸಚಿವರಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್ರವರ ನಿವಾಸ, ಸಂಸ್ಥೆಗಳು ಮತ್ತು ಸಂಬಂಧಿಕರು ಹಾಗೂ ಆಪ್ತರ ನಿವಾಸಗಳ ಮೇಲೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದ ಅಡಿಯಲ್ಲಿ ತೆರಿಗೆ ದಾಳಿ ನಡೆಯಿತು. ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ  ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ನೂರಾರು ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದರು ಎನ್ನಲಾದ ಐದು ವರ್ಷದ ಹಿಂದೆ ದಾಖಲಾಗಿದ್ದ ದೂರಿಗೆ ಇದೀಗ ಮರುಜೀವ ನೀಡಲಾಗಿದೆ. ಕರ್ನಾಟಕ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ ರಾಜಸ್ತಾನದಲ್ಲಿರುವ ವಸುಂಧರಾ ರಾಜೆ ನೇತೃತ್ವದ ಬಿ.ಜೆ.ಪಿ. ಸರ್ಕಾರವು ಮೂರು ದಿನಗಳ ಹಿಂದೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ವಾದ್ರಾ ಅವರ ಭೂಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇವುಗಳು ಕಾಕತಾಳಿಯ ಘಟನೆಗಳು ಎಂದು ನಿರ್ಲಕ್ಷಿಸಲು ಸಾಧ್ಯವಾಗದ ರೀತಿಯಲ್ಲಿ ಅನೇಕ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಹಿಂದೆ ಜನಾರ್ಧನ ರೆಡ್ಡಿ ಎಬ ಖದೀಮನ  ಗಣಿದೂಳಿನ ಹಣದಿಂದ ಆಂಧ್ರದಲ್ಲಿ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡು, ತನ್ನ ತಂದೆಯ (ಮಾಜಿ ಮುಖ್ಯಮಂತ್ರಿ ಡಾ. ವೈ.ಎಸ್. ರಾಜಶೇಖರ ರೆಡ್ಡಿ) ಸಾವಿನ ನಂತರ ವೈ.ಎಸ್.ಆರ್. ಕಾಂಗ್ರೇಸ್ ಪಕ್ಷವನ್ನು ಸ್ಥಾಪಿಸಿ  ಕಾಂಗ್ರೇಸ್ ಪಕ್ಷಕ್ಕೆ ಸವಾಲೆಸದ ಜಗನ್ ರೆಡ್ಡಿಯನ್ನು ಹಿಂದಿನ ಯು.ಪಿ.. ಸರ್ಕಾರ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವನ ರೆಕ್ಕ ಪುಕ್ಕಗಳನ್ನು ಕತ್ತರಿಸಿ ಹಾಕಿತು. ಇದೀಗ, ಕಾಂಗ್ರೇಸ್ ಪಕ್ಷದ ಮಾಜಿ ಕೇಂದ್ರ ಸಚಿವ ಪಿ.ಚಿದಂರಂ ಅವರ ಪುತ್ರ ಕಾರ್ತಿಕ್ ಸಾಮ್ರಾಜ್ಯದ ಮೇಲೆ ಮೋದಿ ನೇತೃತ್ವದ ಸರ್ಕಾರ ಇಂತಹದ್ದೇ ಕ್ರಮಕ್ಕೆ ಮುಗಿಬಿದ್ದಿದೆ.
ಒಟ್ಟಾರೆ, ಇಂತಹ ಸೇಡಿನ ರಾಜಕಾರಣಕ್ಕೆ ತುತ್ತಾದವರಲ್ಲಿ ಯಾರೋಬ್ಬರೂ ಪ್ರಾಮಾಣಿಕರಲ್ಲ, ಸತ್ಯಹರಿಶ್ಚಂದ್ರರಂತೂ ಮೊದಲೇ ಅಲ್ಲ, ಇಂತಹ ನಿರ್ಲಜ್ಜ ರಾಜಕಾರಣಿಗಳನ್ನು ಪಕ್ಷ ಅಥವಾ ಜಾತಿಯ ಹಿನ್ನಲೆಯಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಹಿನ್ನಲೆ, ಇಂತಹವರ ನಿವಾಸಗಳಿಗೆ ಹೋಗಿ ಅವರನ್ನು ಸಂತೈಸಿ, ಹರಸಿ ಬರುತ್ತಿರುವ ಮಠಾಧೀಶರ ಬೌದ್ಧಿಕ ಮತ್ತು ನೈತಿಕ ಪ್ರಜ್ಞೆಯ ದಿವಾಳಿತನ ಇವೆಲ್ಲವೂ ದೇಶದ ರಾಜಕೀಯ ಮತ್ತು ಸಾಮಾಜಿಕ ಹಾಗೂ ಸಾರ್ವಜನಿಕ ಬದುಕನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸುವಂತೆ ನಾಗರೀಕ ಸಮಾಜವನ್ನು ಒತ್ತಾಯಿಸುತ್ತಿವೆ.
ಸ್ವಾತಂತ್ರ್ಯಾನಂತರದ ಭಾರತದಲ್ಲಿ 2010 ವರೆಗೆ ರಾಜಕೀಯ ರಂಗದಲ್ಲಿದ್ದ ವ್ಯಕಿಗಳಿಗೆ  ಘನತೆ ಮತ್ತು ನೈತಿಕತೆ ಎಂಬುದು ಇರುತ್ತಿತ್ತು. ಅವರಿಗೆ ಸಾರ್ವಜನಿಕ ಲಜ್ಜೆ  ಸದಾ ಕಾಡುತ್ತಿತ್ತು. ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರ ಮುಂದೆ ನಿಲ್ಲಬೇಕು ಅಥವಾ ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬ ಆತಂಕವಿರುತ್ತಿತ್ತು. ಆದರೆ, ರಾಜಕೀಯ ಕ್ಷೇತ್ರಕ್ಕೆ ಕಳ್ಳರು, ಹಗಲು ದರೋಡೆಕೋರರು, ಲಾಭಕೋರ ಉದ್ಯಮಿಗಳು ಸಮಾಜ ಸೇವಕರ ಮುಖವಾಡ ಹೊತ್ತು ಲಗ್ಗೆ ಹಾಕಿದ ನಂತರ ಎಲ್ಲವೂ ತಲೆಕೆಳಗಾಯಿತು. ಹಣವೊಂದಿದ್ದರೆ ಸಾಕು ಮತದಾರರನ್ನು ಖರೀದಿಸಬಹುದು ಎಂಬುದನ್ನು ಲಫಂಗರು ಜಗತ್ತಿಗೆ ತೋರಿಸಿಕೊಟ್ಟನಂತರ, ಎಲ್ಲರೂ ಅದೇ ಹಾದಿಯನ್ನು ತುಳಿದರು.
ಇಂದಿನ ಅಸಹ್ಯಕರವಾದ ರಾಜಕಾರಣವನ್ನು ನೋಡುವಾಗ, ದೇಶದ ರಾಜಕಾರಣದಲ್ಲಿ ಮುಖ್ಯಮಂತ್ರಿಗಳಾಗಿ ರಾಜಕೀಯಕ್ಕೆ ಘನತೆ ತಂದುಕೊಟ್ಟ ಪಶ್ಚಿಮ ಬಂಗಾಳದ ಜ್ಯೋತಿ ಬಸು, ಕೇರಳದ ,ಎಂ.ಎಸ್. ನಂಬೂದರಿಪಾಡ್, ಕರ್ನಾಟಕದ ದೇವರಾಜ ಅರಸ್, ತಮಿಳುನಾಡಿನ ಕೆ.ಕಾಮರಾಜ ನಾಡರ್ ಮತ್ತು ಸಿ.ಎಸ್. ಅಣ್ಣಾದೊರೈ ಹಾಗೂ ಈಗಿನ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಇಂತಹ ಮಹನೀಯರು ನೆನಪಾಗುತ್ತಾರೆ. ಇಂದಿನ ಕುಲಗೆಟ್ಟ ರಾಜಕಾರಣಿಗಳಿಗೆ ಮಹಾನುಭಾವರ ಜೀವನವನ್ನು ಬೋಧಿಸುವ ಅಗತ್ಯವಿದೆ. ತಮಿಳುನಾಡಿನಲ್ಲಿ ಕೆ.ಕಾಮರಾಜ ನಾಡರ್ 1954 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾದ ನಂತರ ಮಾಡಿದ ಸಾಧನೆಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ. ಪ್ರಾಥಮಿಕ ಶಾಲೆಗಳಿಲ್ಲದ ಹಳ್ಳಿಗಳು ಇರಕೂಡದು ಎಂಬುದು ಅವರ ನಿಲುವಾಗಿತ್ತು. ದೇಶದಲ್ಲಿ ಪ್ರಥಮ ಬಾರಿಗೆ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಪರಿಚಯಿಸಿದರು ಅವರು. ತಮಿಳುನಾಡಿನಲ್ಲಿ ವಿವಿಧ ನದಿಗಳಿಗೆ ಎಂಟು ಜಲಾಶಯಗಳನ್ನು ನಿರ್ಮಿಸಿ ನೀರಾವರಿಯ ಮೂಲಕ ಅಲ್ಲಿನ ರೈತರಿಗೆ ಆರ್ಥಿಕ ಭದ್ರತೆ ಒದಗಿಸಿದರು. ಯಾವುದೇ ಸಮಸ್ಯೆಗಳಿಗೆ ಬೆನ್ನು ತಿರುಗಿಸಬೇಡಿ, ಧೈರ್ಯದಿಂದ ಎದುರಿಸಿ, ಇದು ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹೇಳುತ್ತಿದ್ದ ಮಾತುಗಳು. ಬ್ರಹ್ಮಚಾರಿಯಾಗಿ ತೀರಾ ಸರಳವಾದ ಬದುಕನ್ನು ಬದುಕುತ್ತಿದ್ದ ಅವರು, ಶಾಲೆಯ ಮಕ್ಕಳ ಬಿಸಿಯೂಟದ ಯೋಜನೆಗೆ ತಮ್ಮ ವ್ಯಯಕ್ತಿಕ ವೆಚ್ಚವನ್ನು ಕಡಿತಗೊಳಿಸುವುದರ ಜೊತೆಗೆ ಸರ್ಕಾರದ ವೆಚ್ಚಕ್ಕೆ ಕಡಿವಾಣ ಹಾಕಿದ್ದರು. ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಕಾಮರಾಜರ ನೇತೃತ್ವದ ಕಾಂಗ್ರೇಸ್ ಸರ್ಕಾರ 1967 ರಲ್ಲಿ ಸಿ.ಎಸ್. ಅಣ್ಣಾದೊರೈ ನೇತೃತ್ವದ ಡಿ.ಎಂ.ಕೆ. ಪಕ್ಷದ ಎದುರು ಸೋತಾಗ, ಕಾಮರಾಜರು ಎದೆ ಬಡಿದುಕೊಂಡು ರೋಧಿಸಲಿಲ್ಲ. ಯಾರನ್ನೂ ದೂಷಿಸಲಿಲ್ಲ ಅತ್ಯಂತ ಘನತೆಯಿಂದ ಅಧಿಕಾರವನ್ನು ಬಿಟ್ಟುಕೊಟ್ಟು ನಿರ್ಗಮಿಸಿದರು. ಅದೇ ರೀತಿಯಲ್ಲಿ  ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಅಣ್ಣಾದೊರೈ ತಮಟೆ, ಡೋಲು, ನಗಾರಿ ಮತ್ತು ಅಭಿಮಾನಿಗಳ ಜೈಕಾರ ಅಥವಾ ವಿಜಯದ ಸಂಕೇತವಾಗಿ  ತಮ್ಮ ಎರಡು ಬೆರಳುಗಳನ್ನು ತೋರಿಸುತ್ತಾ ಅಧಿಕಾರದ ಗದ್ದುಗೆಯನ್ನು ಏರಲಿಲ್ಲ. ಕಾಂಚಿಪುರಂ ನೇಕಾರ ವೃತ್ತಿಯ ಬಡ ಕುಟುಂಬದಿಂದ ಬಂದ ಅಣ್ಣಾದೊರೈ ಪತ್ರಕರ್ತನಾಗಿ, ಸಿನಿಮಾಗಳಿಗೆ ಚಿತ್ರಕಥೆ ಬರೆಯುವ ಲೇಖಕನಾಗಿ ಬೆಳೆದು, ಪೆರಿಯಾರ್ ರಾಮಸ್ವಾಮಿಯವರ ಗರಡಿಯಲ್ಲಿ ಬೆಳೆದವರಾಗಿದ್ದರು. 1965 gಲ್ಲಿ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ದೊಡ್ಡ ಆಂಧೋಲನವನ್ನು ನಡೆಸಿ, ಹಿಂದಿ ಭಾಷೆಯು ತಮಿಳುನಾಡಿಗೆ ಕಾಲಿಡದಂತೆ ನೊಡಿಕೊಂಡವರು. ಅವರ ಹೋರಾಟ ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಏರಿಸಿತು. ಅಂತಹವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕಾಮರಾಜರನ್ನು ಮತ್ತು ಅವರ ಅನುಪಮ ಸೇವೆಯನ್ನು ನೆನದು, ಅವರು ನನಗೆ ಮಾರ್ಗದರ್ಶಕರಾಗಲಿ ಎಂದು ಕೇಳಿಕೊಂಡಿದ್ದರು. ಇದು ಎರಡು ವಿಭಿನ್ನ ರಾಜಕೀಯ ಪಕ್ಷಗಳ ನಡುವಿನ ರಾಜಕೀಯ ನಾಯಕರು ಪರಸ್ಪರ ಗೌರವ ತೋರಿಸುತ್ತಿದ್ದ ಅವರ ದೊಡ್ಡ ಗುಣಕ್ಕೆ ಮಾದರಿಯಾಗಿದೆ. ಇಂತಹವರನ್ನು ಈಗ ಎಲ್ಲಿ ಹುಡುಕೊಣ?

ಇಂತಹದ್ದೇ ರೀತಿಯ ದೊಡ್ಡ ಗುಣ ನಮ್ಮ ಕರ್ನಾಟಕದ ದೇವರಾಜ ಅರಸರಿಗಿತ್ತು. 1978 ರಿಂದ 1980 ಅವಧಿಯಲಿÉುರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅರಸುರವರು ತಮ್ಮ ಸಹೋದ್ಯೋಗಿಗಳ ಕುತಂತ್ರದಿಂದ ಮುಖ್ಯ ಮಂತ್ರಿ ಪದವಿಯನ್ನು ಕಳೆದುಕೊಂಡರು. ಆದರೆ, ಎಂದಿಗೂ ಬಹಿರಂಗವಾಗಿ ತಮ್ಮ ಬೆನ್ನಿಗೆ ಚೂರಿ ಹಾಕಿದವರ ಕುರಿತು ಒಂದು ಮಾತನ್ನೂ ಆಡಿದವರಲ್ಲ. ತಾವೇ ರಾಜಕೀಯಕ್ಕೆ ಕರೆತಂದು ಬೆಳೆಸಿದ ನಾಯಕರು, ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಅರಸುರವನ್ನು ಕಟು ಮಾತುಗಳ ಚೂರಿಯಿಂದ ಇರಿದರೂ ಸಹ ಅವರ ಸಾರ್ವಜನಿಕ ಬದುಕಿಗೆ ಇರಬೇಕಾದ ಸಂಯಮವನ್ನು ಅವರು ಕಳೆದುಕೊಳ್ಳಲಿಲ್ಲ. ಹೆಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ರಾಮಕೃಷ್ಣ ಹೆಗ್ಡೆ, ಜೆ.ಹೆಚ್.ಪಟೇಲ್, ಎಂ.ಪಿ.ಪ್ರಕಾಶ್ ರಂತಹ ಅನೇಕ ಮಹನೀಯರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಸಹ ಸಾರ್ವಜನಿಕ ಬದುಕಿಗೆ ಇರಬೇಕಾದ ಸಜ್ಜನಿಕೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡು ಬಂದವರಾಗಿದ್ದಾರೆ. ಇಂತಹವರ ನಡುವೆ, ಈಗಿನ ರಾಜಕಾರಣದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ. ಆರ್.ಅಶೋಕ್, ಶೋಭಾಕರಂದ್ಲಾಜೆ, ಇಂತಹವರ ತುಟಿ ಮೀರಿದ ಮಾತುಗಳು,ಹಾಗೂ ಕಾಂಗ್ರೇಸ್ ಪಕ್ಷದ ವಿ.ಎಸ್.ಉಗ್ರಪ್ಪನವರ ಭಾವಾವೇಶದ ಮಾತುಗಳನ್ನು ಕೇಳುತ್ತಿದ್ದರೆ, ನಾವು ಮೌನದಿಂದ ತಲೆ ತಗ್ಗಿಸುವಂತಾಗಿದೆ. ಘನತೆ ಮತ್ತು ನೈತಿಕತೆಯಿಲ್ಲದ ಇಂತಹ ಕುಲಗೆಟ್ಟ ರಾಜಕಾರಣ ನಿಜಕ್ಕೂ ನಮಗೆ ಅವಶ್ಯಕತೆ ಇದೆಯಾ? ಇದು ನಾಗರೀಕ ಸಮಾಜವನ್ನು ಸದಾ ಕಾಡುತ್ತಿರುವ ಪ್ರಶ್ನೆಯಾಗಿದೆ.

ಅಣ್ನಾದೊರೈ ಮತ್ತು ಕಾಮರಾಜ್ ಇವರ ಚಿತ್ರಗಳು- ಸೌಜನ್ಯ- ದಿನತಂತಿ (ತಮಿಳು ದಿನಪತ್ರಿಕೆ)

( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣ ಬರಹ)