ಶುಕ್ರವಾರ, ಏಪ್ರಿಲ್ 7, 2017

ಕಾಶ್ಮೀರವೆಂಬ ನೆಲದ ಮೇಲಿನ ನರಕ




ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಕವಿತೆಗಳನ್ನು ಬರೆಯುತ್ತಿದ್ದ ಕಾಲದಲ್ಲಿ “ ಕಾಶ್ಮೀರದ ಹಾಡು” ಎಂಬ ನನ್ನ ಪ್ರಸಿದ್ಧ ಕವಿತೆಯೊಂದರಲ್ಲಿ  ಬರೆದಿದ್ದ ಸಾಲುಗಳಿವು.
ರೆಕ್ಕೆ ಮರೆತ ಹಕ್ಕಿಯ ಹಾಗೆ/ಚಲಿಸದೆ ನಿಂತ ನಾವೆಯ ಹಾಗೆ /ಬದುಕು ಸ್ತಬ್ಧವಾದ ಇಲ್ಲಿ/ನಿತ್ಯ ಸಾವಿನ ಮೆರವಣಿಗೆ./ಬಂದೂಕು ನಳಿಕೆಯ /ಕೆಳಗೆ ನರಳಿ ಹೊರಳಿದ/ಇವರ ಬದುಕ ಬಾಂದಳದಲ್ಲಿ/ಬಾನು ಬೆಳದಿಂಗಳಿಲ್ಲ/ಚೆಂದ್ರ ತಾರೆಯರಂತೂ ಮೊದಲೇ ಇಲ್ಲ/ಗೆಳತೀ/ಕಾಶ್ಮೀರದಲ್ಲೀಗ ಕನಸುಗಳಿಲ್ಲ/ನಮ್ಮ ಕನಸುಗಳಲ್ಲೂ ಕಾಶ್ಮೀರವಿಲ್ಲ.
ಎರಡು ದಶಕಗಳ ನಂತರ ಕಾಶ್ಮೀರ ಕುರಿತು ಅವಲೋಕಿಸಿದಾಗ ಅಲ್ಲಿನ ಸಾಮಾಜಿಕ ಮತ್ತು ರಾಜಕೀಯ ಹಾಗೂ ಧಾರ್ಮಿಕ ಬದುಕಿನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪ್ರತಿ ನಿತ್ಯ ಸಾವು, ನೋವು, ಬಂದೂಕಿನ ಗುಂಡಿನ ಮೊರೆತ, ಭಯೋತ್ಪಾದಕರ ದಾಳಿ, ಮುಷ್ಕರ, ಪ್ರತಿಭಟನೆ ಮತ್ತು ಪ್ರಕ್ಷುಬ್ಧತೆ ಇವುಗಳು ಒಂದು ಕಾಲದಲ್ಲಿ ನೆಲದ ಮೇಲಿನ ಸ್ವರ್ಗ ಎನಿಸಿದ್ದ ಕಾಶ್ಮೀರದ ಅವಿಭಾಜ್ಯ ಅಂಗಗಳಾಗಿವೆ. ಹಾಗಾಗಿ ಭಾರತದ ಸರ್ಕಾರ ಮತ್ತು ಇಲ್ಲಿನ ಜನತೆಯ ಜನತೆಯ ಪಾಲಿಗೆ ಕಾಶ್ಮೀರವೆಂಬುದು  ಈಗ ನೆಲದ ಮೇಲಿನ ನರಕವೆಂಬಂತೆ ಕಾಣುತ್ತಿದೆ. 1947 ರ ಸ್ವಾತಂತ್ರ್ಯಾ.ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಪ್ರದೇಶ ಯಾರಿಗೆ ಸೇರಬೇಕು ಎಂಬುದರ ಕುರಿತಾಗಿ ಉಂಟಾದ ಪ್ರಕ್ಷುಬ್ದ ಪರಿಸ್ಥಿತಿ ಇಂದಿಗೂ ತಣ್ಣಗಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿರುವ ಬಹು ಸಂಖ್ಯಾತ ಸುನ್ನಿ ಮುಸ್ಲಿಂ ಸಮುದಾಯದಲ್ಲಿ ಈ ಕುರಿತು ಯಾವುದೇ ನಿರ್ಧಾರವಿಲ್ಲದೆ, ಪ್ರತ್ಯೇಕ ಕಾಶ್ಮೀರಿವಾದಿಗಳು ಮತ್ತು ಭಾರತ ಸರ್ಕಾರದ ನಡುವೆ ರಾಜಕೀಯ ದಾಳವಾಗಿದ್ದಾರೆ. ಇನ್ನು ಜಮ್ಮು ಪ್ರದೇಶ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಶತ ಶತಮಾನ ಕಾಲ ಬದುಕಿದ್ದ ಕಾಶ್ಮೀರಿ ಪಂಡಿತರು ನೆಲೆ ಕಳೆದುಕೊಂಡು ದೆಹಲಿಯ ಬೀದಿಯಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಜಮ್ಮು ಕಾಶ್ಮೀರ ಸೇರಿದಂತೆ ಕೇಂದ್ರ ಸರ್ಕಾರ ಕಾಶ್ಮೀರಿ ಪಂಡಿತರಿಗೆ ಅನೇಕ ಸವಲತ್ತುಗಳನ್ನು ಒದಗಿಸಿ ಕೊಡಲು ಸಿದ್ಧರಿದ್ದರೂ ಸಹ, ಪಾಕ್ ಪ್ರೇರಿತ ಭಯೋತ್ಪಾದಕರ ಭಯದಿಂದಾಗಿ ತಮ್ಮ ತವರು ನೆಲಕ್ಕೆ ಹಿಂತಿರುಗಿ ಬದುಕು ಕಟ್ಟಿಕೊಟ್ಟಲು ಹಿಂಜರಿಯುತ್ತಿದ್ದಾರೆ.
ಈ ದೇಶದ ಸಂವಿಧಾನ ಮತ್ತು ಭಾರತೀಯ ಅಪರಾಧ ಸಂಹಿತೆ ಪುಸ್ತಕಗಳಲ್ಲಿನ  ಯಾವುದೇ ಕಾನೂನು ಅಥವಾ ನಿಯಾಮಾವಳಿಗಳು ಕಾಶ್ಮೀರಿ ಜನತೆಗೆ ಅನ್ವಯವಾಗುವುದಿಲ್ಲ. ಪ್ರತಿಯೊಂದು ಸಂಹಿತೆ “ ಜಮ್ಮು ಕಾಶ್ಮೀರವನ್ನು ಹೊರತು ಪಡಿಸಿ ಬಾರತದ ನಾಗರೀಕರಿಗೆ ಇದು ಅನ್ವಯವಾಗುತ್ತದೆ” ಎಂಬ ವಾಕ್ಯದಿಂದ ಕೊನೆಗೊಳ್ಳುತ್ತದೆ.  ಭಾರತದ ಒಟ್ಟು ಜನ ಸಂಖ್ಯೆಯ ಕೇವಲ ಒಂದು ಭಾಗದಷ್ಟಿರುವ ಕಾಶ್ಮೀರಿ ಜನತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ವಿಶೇಷ ಪರಿಹಾರದ ಹೆಸರಿನಲ್ಲಿ ನೀಡುತ್ತಿರುವ  ಆರ್ಥಿಕ ಸವಲತ್ತುಗಳನ್ನು ಗಮನಿಸಿದರೆ, ಈ ಪುಟ್ಟ ರಾಜ್ಯವನ್ನು ನೆರೆಯ ಪಾಕಿಸ್ತಾನಕ್ಕೆ  ಕೊಡುಗೆಯಾಗಿ ನೀಡುವುದು ಒಳಿತು ಎನಿಸುತ್ತದೆ. ಕೇವಲ ಹದಿನಾರು ವರ್ಷಗಳ ಅವಧಿಯಲ್ಲಿ ( 2000 ರಿಂದ 2016 ರವರೆಗೆ) ಜಮ್ಮ ಕಾಶ್ಮೀರದ ಜನತೆಗೆ  ಒಂದು ಲಕ್ಷದ ಹದಿನಾಲಕ್ಷ ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಘೊಷಿಸಲಾಗಿದೆ. ಇದರಲ್ಲಿ ಮಿಲಿಟರಿ ಸೇನೆಯ ವೆಚ್ಚವನ್ನು ಸೇರಿಸಲಾಗಿಲ್ಲ. ಅಲ್ಲಿನ ಈಗಿನ ಜನಸಂಖ್ಯೆಗೆ ಈ ಹಣವನ್ನು ಹಂಚಿದರೆ, ಪ್ರತಿ ವ್ಯಕ್ತಿಗೆ ತಲಾ 91 ಸಾವಿರದ 300 ರೂಪಾಯಿ ಸಂದಾಯವಾಗಿದೆ. ( ಜಮ್ಮು ಕಾಶ್ಮೀರದ ಜನಸಂಖ್ಯೆ ಒಂದು ಕೋಟಿ ಇಪ್ಪತ್ತೈದು ಲಕ್ಷ)  ಅಂದರೆ ಭಾರತದ ಜನಸಂಖ್ಯೆಯಲ್ಲಿ ಶೇಕಡ ಒಂದರಷ್ಟು ಭಾಗವಿರುವ ಜನತೆ ಶೇಕಡ ಹತ್ತರಷ್ಟು ಅನುದಾನ ಪಡೆಯುತ್ತಿದ್ದರೆ, ಭಾರತದ ಜನಸಂಖ್ಯೆಯ ಶೇಕಡ ಹದಿಮೂರರಷ್ಟು ಇರುವ ಉತ್ತರ ಪ್ರದೇಶದ ಜನತೆ ಶೇಕಡ 8.2 ರಷ್ಟನ್ನು ಪಡೆಯುತ್ತಿದ್ದಾರೆ.
ಜಮ್ಮು ಕಾಶ್ಮೀರದ ಜನತೆಯ ಬಡತನ ಕುರಿತಂತೆ ಆಶ್ಚರ್ಯಕರ ಅಂಕಿ ಅಂಶಗಳು ಸಮೀಕ್ಷೆಯಿಂದ ಹೊರಬೀಳುತ್ತಿವೆ. 1980 ರಲ್ಲಿ  ಬಡತನದ ರೇಖೆಯ ಕೆಳಗೆ ವಾಸಿಸುತ್ತಿದ್ದವರ ಸಂಖ್ಯೆ ಶೇಕಡ 24.34 ರಷ್ಟು ಇದ್ದದ್ದು, 2000 ದ ಇಸವಿಯ ವೇಳೆಗೆ ಶೇಕಡ 3.48 ಕ್ಕೆ ಇಳಿದಿತ್ತು.  ಕಳೆದೊಂದು ದಶಕದಿಂದ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರದ ಫಲವಾಗಿ ಈಗ ಪುನಃ  ಶೇಕಡ 21.3 ಕ್ಕೆ ಏರಿಕೆಯಾಗಿದೆ..

ಜಮ್ಮು ಕಾಶ್ಮೀರದ ಒಟ್ಟು ವಿಸ್ತೀರ್ಣ 2 ಲಕ್ಷದ 22 ಸಾವಿರದ 236 ಚದುರ ಕಿಲೊಮೀಟರ್. ಇದರಲ್ಲಿ ಭಾರತದ ಹಿಡಿತದಲ್ಲಿ  ಕೇವಲ 1 ಲಕ್ಷದ 1 ಸಾವಿರ 387 ಕಿಲೊಮೀಟರ್ ವ್ಯಾಪ್ತಿ ಪ್ರದೇಶ ಮಾತ್ರ ಉಳಿದಿದೆ. ಇನ್ನುಳಿದ ಪ್ರದೇಶದಲ್ಲಿ ಮುಕ್ಕಾಲು ಪಾಲು ಪಾಕ್ ಆಕ್ರಮಿತ ಕಾಶ್ಮೀರವೆಂದು ಹಾಗೂ ಉಳಿದ ಭಾಗ ಚೀನಾ ಆಕ್ರಮಿತ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಈ ಪ್ರದೇಶಗಳಿಂದ ಚೀನಾ ಮತ್ತು ಪಾಕ್ ಸರ್ಕಾರಗಳು ಭಯೋತ್ಪಾದಕರಿಗೆ ನಿರಂತರವಾಗಿ ನೆರವು ನೀಡುತ್ತಾ ಜಮ್ಮು ಕಾಶ್ಮೀರದಲ್ಲಿ ಹಿಂಸೆ ಮತ್ತು ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿವೆ. ಭಾರತೀಯ ಸೇನಾ ಪಡೆಗೆ ಗಡಿ ಪ್ರದೇಶದಲ್ಲಿ ಪ್ರತಿ ದಿನ ನುಸುಳುವ ಭಯೋತ್ಪಾದಕರನ್ನು ಗುರುತಿಸಿ ಹೊಡೆದು ಉರುಳಿಸುವುದು ನಿತ್ಯ ಕಾಯಕವೆಂಬಂತಾಗಿದೆ. ಇಂತಹ ಹಿಂಸಾ ಚಾರಕ್ಕೆ ಸ್ಥಳೀಯರು ಪ್ರೋತ್ಸಾಹ ನೀಡುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ. ಎರಡು ತಿಂಗಳ ಹಿಂದೆ ಶ್ರೀನಗರದಲ್ಲಿ ಹಿಜ್ ಬುಲ್ ಮುಜಾಹಿದ್ದಿನ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ  ಬುರಾನ್ ಮುಜಾಫರ್ ವಾನಿ ಎಂಬ ಇಪ್ಪತ್ತೊಂದು ವಯಸ್ಸಿನ ಯುವಕ ಭದ್ರತಾ ಪಡೆಯ ಗುಂಡಿಗೆ ಬಲಿಯಾದ ನಂತರ ಶ್ರೀನಗರದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಹಿಂಸಾಚಾರದಲ್ಲಿ 43 ಮಂದಿ ಗುಂಡಿಗೆ ಬಲಿಯಾದರು. ನೂರಾರು ಮಂದಿ ಸೇನಾ ಸಿಬ್ಬಂದಿ ಸಿಡಿಸಿದ ರಬ್ಬರ್ ಗುಂಡುಗಳಿಂದ ಗಾಯಗೊಂಡರು. ಭಯೋತ್ಪಾದಕನನ್ನು ಹುತಾತ್ಮನೆಂದು ಸ್ಥಳೀಯರು ಪ್ರತಿಬಿಂಬಿಸಿದರ ಪರಿಣಾಮವಾಗಿ ಯುವಕನ ಕುಟುಂಬಕ್ಕೆ ಕೇಂದ್ರ ಸರ್ಕಾರವು  ಹತ್ತು ಲಕ್ಷ ರೂಪಾಯಿ ಘೋಷಿಸಿ ಹಿಂಸೆಯನ್ನು ತಣ್ಣಾಗಿಸಿತು.
ಕಾಶ್ಮೀರದಲ್ಲಿ ಮುಸ್ಲಿಂ ನಿರುದ್ಯೋಗಿ ಯುವಕರನ್ನು ಸೆಳೆಯುತ್ತಿರುವ ಭಯೋತ್ಪಾನೆಯ ಸಂಘಟನೆಗಳು ಅಲ್ಲಿನ ಯುವಕರ ಕುಟುಂಬಗಳಿಗೆ  ಸುಮಾರು ಐದರಿಂದ  ಹಿಡಿದು ಹತ್ತು ಲಕ್ಷ ರೂಪಾಯಿ ಹಣವನ್ನು ನೀಡಿ ಅವರನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ದು ತರಬೇತಿ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮನೆಯಲ್ಲಿ ಬೆಳೆದು ನಿಂತ ತಂಗಿಯರ ವಿವಾಹದ ಖರ್ಚಿಗಾಗಿ, ಮತ್ತು ಬಡತನದ ಕುಟುಂಬದ ನಿರ್ವಹಣೆಗಾಗಿ ಹಣದ ಆಮೀಷಕ್ಕೆ ಬಲಿಯಾಗುತ್ತಿರುವ  ಮುಗ್ದ ಯುವಕರು ಇಂದು ಭಯೋತ್ಪಾದಕರಾಗಿ ಪರಿವರ್ತನೆ ಹೊಂದಿ ಹುಟ್ಟಿ ಬೆಳದ ತಾಯ್ನಾಡಿನ ವಿರುದ್ಧ ಜೆಹಾದ್ ಹೆಸರಿನಲ್ಲಿ ( ಧರ್ಮ ಯುದ್ಧ) ಬಂದೂಕು ಹಿಡಿದಿರುವುದು ವರ್ತಮಾನ ಭಾರತದ ದುರಂತಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಜಮ್ಮು ಕಾಶ್ಮೀರದ ಜ್ವಲಂತ ಸಮಸ್ಯೆಗಳನ್ನು ವಿಷಯವನ್ನಾಗಿ ಇಟ್ಟುಕೊಂಡು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ರಾಹುಲ ಪಂಡಿತ ಎಂಬ ಯುವ ಪತ್ರಕರ್ತ ಬರೆದ “ our Moon has Blood Clots” ಎಂಬ  ಆತ್ಮಕಥಾನಕದ  ಕೃತಿ ಹಾಗೂ ಶ್ರೀನಗರದ ಕೇಂದ್ರೀಯ ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮವನ್ನು ಬೋಧಿಸುತ್ತಿರುವ ಯುವ ಉಪನ್ಯಾಸಕ  ಶಹನಾಜ್ ಬಷೀರ್ ಎಂಬಾತ ಬರೆದ “ Scattered Soulsಎಂಬ ಕಥಾ ಸಂಕಲನ ಈ ಎರಡೂ ಕೃತಿಗಳೂ ಕಾಶ್ಮೀರದ ಹಿಂದೂ-ಮುಸ್ಲಿಂ ಸಮುದಾಯದ ನೋವು ಮತ್ತು ಬವಣೆಗಳನ್ನು ನಮ್ಮ ಮುಂದೆ ತೆರದಿಡುತ್ತವೆ.
ಸುಮಾರು  ಮೂರು ವರ್ಷಗಳ ಹಿಂದೆ ಪ್ರಕಟವಾದ  ಹಾಗೂ ದೆಹಲಿಯಲ್ಲಿ ಪತ್ರಕರ್ತನಾಗಿರುವ ರಾಹುಲ ಪಂಡಿತನ ಆತ್ಮಕಥೆಯಲ್ಲಿ ಲೇಖಕನು ಕಾಶ್ಮೀರದ ತನ್ನ ಬಾಲ್ಯದ ದಿನಗಳನ್ನು ಮತ್ತು ಅಲ್ಲಿದ್ದ ಹಿಂದು-ಮುಸ್ಲಿಂ ಸಮುದಾಯದ ಸಹಬಾಳ್ವೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ.. ಅದೇ ರೀತಿ ಹಂತ ಹಂತ ಮುಸ್ಲಿಂ ಮೂಲಭೂತವಾದಿಗಳ ಕೈಗೆ ಸಿಲುಕಿ ನಲುಗಿ ಹೋದ ಕಾಶ್ಮೀರಿ ಪಂಡಿತ ಕುಟುಂಬಗಳ ಗೋಳಿನ ಕಥೆಯನ್ನು ,ಹಾಗೂ  ಅವರ ವಲಸೆಯ ಅತಂತ್ರ ಬದುಕನ್ನು ಮನ ಮಿಡಿಯುವಂತೆ ದಾಖಲಿಸಿದ್ದಾನೆ. ಈ ಕೃತಿಯ  ಪಸ್ತಾವನೆಯಲ್ಲಿ ರಾಹುಲ ಪಂಡಿತ ದಾಖಲಿಸಿರುವ ಕಾಶ್ಮೀರಿ ಪಂಡಿತರ ಇತಿಹಾಸ ನಿಜಕ್ಕೂ ಅಮೂಲ್ಯವಾದುದು. ಶೈವ ಮತ್ತು ಬೌದ್ಧ ದರ್ಮಕ್ಕೆ ಹಾಗೂ ಹಿಂದೂ ಧರ್ಮದ ಸಂಸ್ಕೃತಿಗೆ ಕಾಶ್ಮೀರಿ ಪಂಡಿತರು ಅಥವಾ ಬ್ರಾಹ್ಮಣರೆಂದು ಗುರುತಿಸಿಕೊಂಡಿರುವ ವಿದ್ವಾಂಸರು ನೀಡಿರುವ ಕೊಡುಗೆಗಳ ವಿವರಗಳನ್ನು ದಾಖಲಿಸಿದ್ದಾನೆ. ಹನ್ನೆರೆಡನೆಯ ಶತಮಾನದಲ್ಲಿ “ರಾಜತರಂಗಿಣಿ” ಎಂಬ ಅಮೂಲ್ಯವಾದ ಹಾಗೂ ಕಾಶ್ಮೀರದ ರಾಜರ ಇತಿಹಾಸವನ್ನು ಹೇಳುವ ಕೃತಿಯನ್ನು ಬರೆದ ಕಲಃಣ, ಹತ್ತನೇ ಶತಮಾನದಲ್ಲಿ ಬದುಕಿದ್ದ ಹಾಗೂ ತಂತ್ರಾಲೋಕ ಮತ್ತು ಅಭಿನವಭಾರತಿ ಎಂಬ  ಭರತನ ನಾಟ್ಯಶಾಸ್ತ್ರದ ಮೇಲೆ ಟಿಪ್ಪಣಿ ಬರೆದ ಅಭಿನವಗುಪ್ತ, ಹನ್ನೊಂದನೆಯ ಶತಮಾನದ ಕವಿ ಹಾಗೂ ಬೃಹತ್ ಕಥಾ ಮಂಜರಿ ಬರೆದ ಕ್ಷೇಮೆಂದ್ರ, “ಕಥಾ ಸರಿತ್ಸಾಗರ” ಬರೆದ ಸೋಮೇಂದ್ರ, ಹೀಗೆ ಪುರಾತನ ವಿದ್ವಾಸರಿಂದ ಹಿಡಿದು, ಕ್ರಿಸ್ತಪೂರ್ವದಲ್ಲಿ ಬೌದ್ಧ ಧರ್ಮದ ವಿಸ್ತರಣೆಗೆ ಶ್ರಮಿಸಿದ ಗುಣವರ್ಮನ್, ಕುಮಾರಜೀವ, ಗುರು ಪದ್ಮಸಂಬ ಹೀಗೆ ಅನೇಕರನ್ನು ಹೆಸರಿಸಿ, ಕಾಶ್ಮೀರದ ಭವ್ಯವಾದ ಗತಕಾಲದ ಇತಿಹಾಸವನ್ನು ನಮ್ಮ ಮುಂದೆ ಇರಿಸಿದ್ದಾನೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಶಹನಾಜ್ ಬಷೀರ್ ನ  ಕಥಾ ಸಂಕಲನದಲ್ಲಿ ಲೇಖಕ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ, ತಾನು ಕಂಡ ದುರಂತ ಘಟನೆಗಳನ್ನು ಕಥೆಯಾಗಿಸಿದ್ದಾನೆ.. ಕಾಶ್ಮೀರದ ಹಿಂಸಾಚಾರದಲ್ಲಿ ಪರಿಸ್ಥಿತಿಯ ಕೂಸುಗಳಾಗಿ ಛಿದ್ರಗೊಂಡಿರುವ ಮುಸ್ಲಿಂ ಕುಟುಂಬಗಳ ಕಥೆಗಳು ಓದುಗರ ಮನಸ್ಸನ್ನು ಕಲಕುವಂತಿವೆ. ಕಥೆಗಳಷ್ಟೇ ಆಕರ್ಷಕವಾಗಿ ಅವುಗಳಿಗೆ  ನೀಡಿರುವ ಶೀರ್ಷಿಕೆ  ಈ ಕೃತಿಯ ವಿಶೇಷವಾಗಿದೆ.

ಈ ಎರಡೂ ಕೃತಿಗಳು ನಮ್ಮ ಪಾಲಿಗೆ ಕೇವಲ ಸಾಹಿತ್ಯ ಕೃತಿಗಳಾಗಿರದೆ, ಕಾಶ್ಮೀರದ ವಾಸ್ತವ ಸ್ಥಿತಿ ಗತಿಗಳನ್ನು ತರದಿಡುವ ಮಹತ್ವದ ದಾಖಲೆಗಳಂತೆ ತೋರುತ್ತವೆ.. ಇವುಗಳನ್ನು ಆಧಾರವಾಗಿಟ್ಟು ಕಾಶ್ಮಿರದ ಸಮಸ್ಯೆಗೆ ಈ ದೇಶದ ಚಿಂತಕರು, ಮತ್ತು ರಾಜಕೀಯ ಧುರೀಣರು ಪರಿಹಾರ ಹುಡುಕಲು ಈ ಕೃತಿಗಳು ಸಹಾಯಕವಾಗಬಲ್ಲವು.. 
(ಕರಾವಳಿ ಮುಂಜಾವು ದಿನಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)

ಭಾನುವಾರ, ಏಪ್ರಿಲ್ 2, 2017

ಸಣ್ಣ ಪುಟ್ಟ ಆಸೆಗಳ ಆತ್ಮ ಚರಿತ್ರೆ ಎಂಬ ಪ್ರಯೋಗಶೀಲತೆಯ ಕೃತಿ ಕುರಿತು


ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಥೆಗಾರರಾಗಿ, ಕಾದಂಬರಿಗಾರ ಮತ್ತು ಪ್ರಬಂಧಕಾರರಾಗಿ ಗುರುತಿಸಿಕೊಂಡಿರುವ ಕೆ.ಸತ್ಯನಾರಾಯಣರವರು ಕಳೆದ ಮೂರು ದಶಕಗಳಿಂದ ತಮ್ಮ ಲವ ಲವಿಕೆಯ ಬರೆವಣಿಗೆ ಮತ್ತು ಪ್ರಯೋಗಶೀಲತೆಯ ಗುಣದ ಮೂಲಕ ಬರಹಗಳಲ್ಲಿ   ವಿಶಿಷ್ಟ ಹೆಜ್ಜೆಯ ಗುರುತುಗಳನ್ನು ದಾಖಲಿಸಿದವರು. ಇಲ್ಲಿಯವರೆಗೆ ವರ್ತಮಾನ ಜಗತ್ತಿನ ಯಾವುದೇ ರೀತಿಯ  ತತ್ವಗಳಿಗೆ ಅಥವಾ ಪಂಥಗಳ ಜೊತೆ ಗುರುತಿಸಿಕೊಳ್ಳದೆ ನಿರಂತರವಾಗಿ ಒಂದು ನಿರ್ಧಿಷ್ಟ ಮಟ್ಟದ  ಅಂತರವನ್ನು ಕಾಯ್ದುಕೊಂಡು ಬಂದಿರುವ ಲೇಖಕರು ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ, ಸಾಹಿತಿಯಾಗಿ ಅವುಗಳನ್ನು ಯಾವುದೇ ರಾಗ ದ್ವೇಷವಿಲ್ಲದೆ ನಿರುದ್ವಿಗ್ನವಾಗಿ ವಿಶ್ಲೇಷಿಸುತ್ತಾ ಬಂದಿದ್ದಾರೆ. ಎಲ್ಲಾ ಸಿದ್ಧಾಂತಗಳಿಗಿಂತ  ಬದುಕಿನಲ್ಲಿ ಜೀವನಾನುಭವ ಮುಖ್ಯ ಎಂದು ನಂಬಿರುವ ಸತ್ಯನಾರಾಯಣರವರು  ಅಕ್ಷರದ ಬಗೆಗಿನ ಪ್ರೀತಿ ಮತ್ತು ಬದ್ಧತೆಯನ್ನು ಜೀವನ ಪೂರ್ತಿ ಕಾಪಾಡಿಕೊಂಡು ಬಂದವರುಹಾಗಾಗಿ ಅವರ ಬಹುತೇಕ ಎಲ್ಲಾ ಬರಹಗಳಲ್ಲಿ ಹೊಸ ಬಗೆಯ ಒಳನೋಟಗಳ ಜೊತೆಗೆ ವೈಚಾರಿಕತೆ ಮತ್ತು ವಿವೇಕ ಇವೆಲ್ಲವೂ ಎದ್ದು ಕಾಣುತ್ತವೆ.   ವೃತ್ತಿಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ  ಭಾರತದ  ಬಹು ಮುಖ್ಯನಗರಗಳಲ್ಲಿ ಸೇವೆ ಸಲ್ಲಿಸುತ್ತಾ ಎಲ್ಲಾ ಬಗೆಯ ಭಾಷೆ, ಧರ್ಮ, ಸಂಸ್ಕøತಿಯ ಜೊತೆ ಒಡನಾಡುವುದರ ಮೂಲಕ ಅಪಾರವಾದ ಜೀವನಾನುಭವವನ್ನು ದಕ್ಕಿಸಿಕೊಂಡಿರುವ ಕೆ.ಸತ್ಯನಾರಾಯಾಣರು ಇದೀಗ  ತಮ್ಮ  ನಿವೃತ್ತಿಯ ನಂತರ ಆತ್ಮಕಥೆಯ  ಮೂಲಕ  ವೃತ್ತಿಜೀವನದ ನೆನಪುಗಳು ಹಾಗೂ  ಬಾಲ್ಯದ ನೆನಪುಗಳನ್ನು ಪ್ರತ್ಯೇಕವಾಗಿ  ದಾಖಲಿಸತೊಡಗಿದ್ದಾರೆ. ಈಗಾಗಲೇ   ಆತ್ಮ ಚರಿತ್ರೆಯ ಪ್ರಕಾರದಲ್ಲಿ ಮೊದಲನೆಯ ಭಾಗವಾಗಿನಾವೇನೂ ಬಡವರಲ್ಲಎಂಬ ಕೃತಿಯನ್ನು ಹೊರತಂದು ಸಾಹಿತ್ಯಾಸಕ್ತರ ಗಮನ ಸೆಳದಿರುವ  ಲೇಖಕರು, ಇದೀಗಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆಎಂಬ ಕೃತಿಯ ಮೂಲಕ ಆತ್ಮ ಚರಿತ್ರೆಯ ಪ್ರಕಾರಕ್ಕೆ ಹೊಸ ಸಾಧ್ಯತೆಯನ್ನು ಸಂಲಗ್ನಗೊಳಿಸಿದ್ದಾರೆ.

ಪ್ರಯೋಗಶೀಲತೆಯು ಕೆ.ಸತ್ಯನಾರಾಯಣರವರ  ಬರಹದ ವೈಶಿಷ್ಟಮತ್ತು ಅವರ ಮನೋಧರ್ಮ ಎನ್ನುವುದಕ್ಕೆ ಕೃತಿ ಕೂಡ  ಸಾಕ್ಷಿಯಾಗಿದೆಭಿನ್ನ ಭಿನ್ನವಾದ ಸಾಹಿತ್ಯಪ್ರಕಾರದಲ್ಲಿ ಕೈ ಆಡಿಸುತ್ತಾ, ಕಥೆ, ವಸ್ತು, ನಿರೂಪಣಾ ಶೈಲಿ  ಹೀಗೆ ಎಲ್ಲವುಗಳಲ್ಲಿ ತಮ್ಮದೇ ಆದ  ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿರುವ ಇವರು; ಸೃಜನಶೀಲತೆ ಎನ್ನುವುದು ಮುರಿದು ಕಟ್ಟಲು ಲೇಖಕರಿಗೆ ಇರುವ ಪ್ರಕ್ರಿಯೆ ಎಂದು ನಂಬಿದವರು. ಹಾಗಾಗಿ ಇವರ ಕಥೆ, ಕಾದಂಬರಿಗಳು, ಪ್ರಬಂಧಗಳು ಸದಾ ನವ ನವೀನ ಕಥಾ ವಸ್ತುಗಳಿಂದ ಕೂಡಿರುವುದು ಮಾತ್ರವಲ್ಲದೆ, ಅವುಗಳ ಶೀರ್ಷಿಕೆ ಮತ್ತು ನಿರೂಪಣಾ ಶೈಲಿಗಳಿಂದ ಓದುಗರಿಗೆ ಆಪ್ತವಾಗುತ್ತವೆ. ಅವರ ಪ್ರಯೋಗದ ಮುಂದುವರಿದ ಭಾಗದಂತೆ ಕಾಣುವಸಣ್ಣ ಪುಟ್ಟ ಆಸೆಗಳ ಆತ್ಮ ಚರಿತ್ರೆಕೃತಿಯು  ಹಲವು ಕಾರಣಕ್ಕಾಗಿ ಮುಖ್ಯ ಕೃತಿಯಾಗಿ ನಾವು ಪರಿಗಣಿಸಬೇಕಿದೆ. ಇಂದಿನ ದಿನಮಾನಗಳಲ್ಲಿ ಆತ್ಮ ಚರಿತ್ರೆಗಳೆನ್ನುವುದು  ಬರಹಗಾರರ ಆತ್ಮರತಿಯ ಅತಿರೇಕದ ದಾಖಲೆಗಳನೋ ಎಂಬಂತೆ ಅಥವಾ ತಮ್ಮ ಸಮಕಾಲೀನ ಬರಹಗಾರರ ಬಗ್ಗೆ   ಜೀವಮಾನವಿಡಿ ಕಾಯ್ದಿಟ್ಟುಕೊಂಡು ಬಂದಿದ್ದ ಅಸಹನೆದ್ವೇಷ, ಸಿಟ್ಟು ಇವುಗಳನ್ನು ಹೊರಹಾಕಿ, ಸೇಡು ತೀರಿಸಿಕೊಳ್ಳಬಹುದಾದ ಪ್ರಕ್ರಿಯೆಯ ರೂಪದಂತೆ ಕಾಣುತ್ತಿರುವಾಗ, ಇಂತಹ ತಥಾಕಥಿತ ಮಾರ್ಗವನ್ನು ಸತ್ಯನಾರಾಯಣರು ಇಲ್ಲಿ ತ್ಯೆಜಿಸಿರುವುದು ಮುಖ್ಯ ಅಂಶವಾಗಿದೆ

ಓದುಗರಲ್ಲಿ ಯಾವುದೇ ರೀತಿಯ  ಅನುಕಂಪವನ್ನು ಬಯಸದೆ  ತಮ್ಮ ಬಾಲ್ಯದ ಬವಣೆಗಳನ್ನು ಮತ್ತು ಆಸೆಗಳನ್ನು ಬರೆದಿರುವ ಲೇಖಕರು ಕೃತಿಯುದ್ದಕ್ಕೂ ತಮ್ಮ  ಅನುಭವಗಳನ್ನು ದಾಖಲಿಸುವುದರ ಮೂಲಕಅರೆ, ಇವುಗಳು ನಮ್ಮ ಅನುಭವಗಳಾಗಿವೆಯಲ್ಲ!” ಎಂದು ಓದುಗರು ಅಚ್ಚರಿಪಡವ ರೀತಿಯಲ್ಲಿ ನಿರೂಪಿಸಿದ್ದಾರೆ.

ಕೃತಿಯ ಪ್ರಸ್ತಾವನೆಯಲ್ಲಿ ತಮ್ಮ ಬಾಲ್ಯದ ಸ್ಮತಿಯಾಗಿ ಕಾಡಿದ "ಒಂದು ಬೂರಗ ಮರ ಮತ್ತು ಕಟ್ಟೆಯ "ಕುರಿತು  ಲೇಖಕರು ಬರೆದಿರುವ ಮಾತುಗಳು ಹೀಗಿವೆಬೂರಗದ ಮರದ ಕೆಳಗೆ ದಕ್ಕಿದ ಲೋಕಜ್ಞಾನಕ್ಕೂ, ದೊಡ್ಡ ಕಟ್ಟೆಯಲ್ಲಿ ವ್ಯಕ್ತವಾಗುತ್ತಿದ್ದ ಲೋಕ ಜ್ಞಾನಕ್ಕೂ ಸಂಬಂಧವಿದೆ. ದೊಡ್ಡ ಕಟ್ಟೆಯಲ್ಲಿ ಕೂಡ ವ್ಯಕ್ತವಾಗುದ್ದುದು ಕೂಡ ಸಣ್ಣ ಪುಟ್ಟ ಆಸೆಗಳನ್ನು , ದಾಯಾದಿ ಮತ್ಸರಗಳನ್ನು ಪೂರೈಸಿಕೊಳ್ಳಲಾರದವರು ಬಂದು ಅಡಗಿಕೊಂಡು ಕಾತರಿಸುತ್ತಿದ್ದ ರೀತಿಯೇ, ಮಧ್ಯಾಹ್ನವು ಸಂಜೆಗೆ ಹೊರಳುವ ನೀರವ-ನಿಶ್ಚಲ ಹೊತ್ತಿನಲ್ಲಿ ಬೂರಗದ ಮರದ ಕೆಳಗೆ ನಿಂತ ಆಧ್ಯಾತ್ಮಿಕ ಪಿಪಾಸುಗಳು ಎಷ್ಟೇ ಹೊತ್ತಾದರೂ ಕಾಯುತ್ತಾ ನಿಲ್ಲುವರು. ಸಣ್ಣ ಪುಟ್ಟ ಜನರ ಸಣ್ಣ ಪುಟ್ಟ ಆಕಾಂಕ್ಷೆಗಳು ಎರಡೂ ಕಡೆ ವ್ಯಕ್ತವಾಗುತ್ತಿದ್ದುದೇ ಬೂರಗದ ಮರ ಮತ್ತು  ದೊಡ್ಡ ಕಟ್ಟೆಗೆ ಇರುವ ಆಧ್ಯಾತ್ಮಿಕ ಒಳಸಂಬಂಧವಿರಬಹುದೆ? ಒಳಸಂಬಂಧದ ದೆಸೆಯಿಮದಾಗಿಯೇ ಮರ ಮತ್ತು ಕಟ್ಟೆ ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆಯನ್ನು ಬರೆಯುತ್ತಿರುವ ನನಗೆ ಈಗ ಒಟ್ಟಿಗೆ ಒಟ್ಟಂದದಲ್ಲಿ ಕಾಣುತ್ತಿರಬಹುದೆ?’ ಎಂಬ ಅರ್ಥಪೂರ್ಣ ಪ್ರಶ್ನೆಯನ್ನು ಹಾಕಿಕೊಂಡಿದ್ದಾರೆ. ಲೇಖಕರು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿರುವ ಘಟನೆಗಳನ್ನು ಓದುತ್ತಿದ್ದಾಗ ಮಾತು ನಿಜವೆನಿಸುತ್ತದೆ.

ಮಂಡ್ಯನಗರಕ್ಕೆ ಹೊಂದಿಕೊಂಡಂತೆ ಇರುವ ತಾಯಿಯ ಊರು (ಗುತ್ತಲು ಎಂಬ ಗ್ರಾಮ) ಹಾಗೂ ತಂದೆಯ ಊರಾದ ಕೊಪ್ಪ ಗ್ರಾಮವೂ ಒಳಗೊಂಡಂತೆ ಬಾಲ್ಯದಲ್ಲಿ ತಾವು ಓದಿದ ಕೊಳ್ಳೆಗಾಲದ ಸುತ್ತ ಮುತ್ತಲಿನ ಪರಿಸರವನ್ನು ದಾಖಲಿಸಿರುವ ಲೇಖಕರು ಯಾವುದೇ ಮುಜುಗರವಿಲ್ಲದೆ, ಒಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಸರ್ಕಾರಿ ನೌಕರರಾಗಿದ್ದ ತಮ್ಮ ತಂದೆಯ ಸೀಮಿತ ಆದಾಯದಲ್ಲಿ ಬದುಕು ಕಟ್ಟಿಕೊಂಡ ಬಗೆಯನ್ನು ಮತ್ತು ತಮ್ಮ ಬಾಲ್ಯದ ಕನಸುಗಳು ಹಾಗೂ ಬವಣೆಗಳನ್ನು ನಿಸ್ಸಂಕೋಚವಾಗಿ ದಾಖಲಿಸಿರುವುದು ಕೃತಿಯ ವಿಶೇಷವಾಗಿದೆ. ಬಾಲಕನಾಗಿದ್ದ ಸಂದರ್ಭದಲ್ಲಿ  ತನ್ನ ವಿಧವೆ ಅಜ್ಜಿಗೆ ಪ್ರತಿ ತಿಂಗಳೂ ಕ್ಷೌರಿಕನೊಬ್ಬ ತಲೆ ಬೋಳಿಸುವ ಕ್ರಿಯೆ ಮತ್ತು  ತಲೆ ಬೋಳಿಸಿದ ನಂತರ ಅಜ್ಜೆಯ ತಲೆಯ ಮೇಲೆ  ಅಲ್ಲಲ್ಲಿ ಕಾಣುವ ರಕ್ತದ ಕಲೆಗಳನ್ನು ಕಂಡು ನೊಂದುಕೊಂಡು, ಮುಂದೆ ಒಳ್ಳೆಯ ಕ್ಷೌರಿಕನಾಗುವ ಕನಸು ಕಾಣುವನಾಪಿತನಾಗುವ ಆಸೆ, ಎಂಬ ಲೇಖನ, ತನ್ನ ಸಹಪಾಠಿಯೊಬ್ಬ ತಂದೆಯ ಆಕಸ್ಮಿಕ ನಿಧನಾನಂತರ ಪೆಟ್ಟಿಗೆ ಅಂಗಡಿ ಮಾಲೀಕನಾದದ್ದನ್ನು ಕಂಡು ತಾನೂ ಮಾಲೀಕನಾಗಬೇಕೆಂದು ಬಯಸುವ ಪ್ರಸಂಗ, ಸಹಪಾಠಿ ಹೆಣ್ಣು ಮಕ್ಕಳ ಮನಗೆಲ್ಲಲು ಪ್ರಯತ್ನಿಸುವ ಬಹು ವಲ್ಲಬನಾಗುವ ಆಸೆ, ತಂದೆ ಹೊಲಿಸಿಕೊಟ್ಟ ಕೆಟ್ಟದಾದ ದೊಗಳ ಕಾಕಿ ಚಡ್ಡಿ ಕುರಿತು ಬರೆದಿರುವನನ್ನ ಚಡ್ಡಿ ಕಳುವಾಗಲಿಎಂಬ ಘಟನೆಗಳ ಕುರಿತಾದ ಬರಹಗಳು ಹೀಗೆ ಇಲ್ಲಿನ ಬಹುತೇಕ ಅನುಭವಗಳು ಓದುಗರ ಮುಖದ ಮೇಲೆ ಮಂದಹಾಸ ಮೂಡಿಸುವುದರ ಜೊತೆಗೆ ನೆನಪಿನಲ್ಲಿ ಬಹುಕಾಲ ಉಳಿಯುತ್ತವೆ. ಎಲ್ಲಾ ವ್ಯಕ್ತಿಗಳಿಗೆ ವಯಸ್ಸಿಗೆ ಸಹಜವಾಗಿ ಬರುವ ಆಸೆಗಳನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಸತ್ಯನಾರಾಯಣರು ಕೃತಿಯಲ್ಲಿ  ದಾಖಲಿಸುತ್ತಾ ಹೋಗುತ್ತಾರೆ.

ಕೃತಿಯಲ್ಲಿ ಕಾಣುವ ಹೆಂಗಸರಿಂದ ಪಾಠ ಕಲಿಯುವ ಆಸೆ, ಮುಂಗೂದಲು ಸವರಬೇಕು, ಬಾಗಿಲು ರಿಪೇರಿ ಬೇಡವೇ ಬೇಡ, ಕೊನೆ ಪ್ರಯಾಣಿಕನಾಗುವ ಆಸೆ, ಚೀಟಿ ಬರೆದು ಬಿಸಾಕುವ ಆಸೆ, ರೈತನಾಗಬೇಕು, ಬೈತಲೆ ತೆಗೆಯುವ ಆಸೆ, ಸಂಪಾದಕನಾಗುವ ಆಸೆ, ಬಡವನಾಗುವ ಆಸೆ, ಡೈನಮೊ ಸೈಕಲ್ ಆಸೆ, ಬಡ್ಡಿ ಸಾಹುಕಾರನಾಗುವ ಆಸೆ ಹೀಗೆ ನಲವತ್ತು ಬಾಲ್ಯದ ಆಸೆಗಳನ್ನು ಲೇಖಕರು ಕೃತಿಯಲ್ಲಿ ದಾಖಲಿಸಿದ್ದಾರೆ. ಇವುಗಳೆಲ್ಲವೂ ಕೇವಲ ಕೆ.ಸತ್ಯನಾರಾಯಣರ ಆಸೆಗಳಾಗಿರದೆ ನಮ್ಮೆಲ್ಲರ ಬಾಲ್ಯದ ಆಸೆಗಳೂ ಸಹ ಆಗಿದ್ದವು ಎಂಬ ಕಾರಣಕ್ಕಾಗಿ ಕೃತಿಯು ಓದುಗರಿಗೆ ಆಪ್ತವೆನಿಸುತ್ತದೆ. ಆತ್ಮಚರಿತ್ರೆಯನ್ನೂ ಹೀಗೂ ಸಹ ಯಾವುದೇ ರಾಗ ದ್ವೇಷವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ಬರೆಯಬಹುದು ಎಂಬುದಕ್ಕೆ ಕೃತಿ ಕನ್ನಡದ ಆತ್ಮಕಥೆಯ ಪ್ರಕಾರಕ್ಕೆ ಹೊಸ ಹೊಳಹು ಮತ್ತು ದಾರಿಯನ್ನು ತೋರಿಸಿರುವುದು ವಿಶೇಷ. ಕೆ.ಸತ್ಯನಾರಾಯಣರು ತಮ್ಮ  ಯಕ್ಷ ಪ್ರಶ್ನೆ ಎಂಬ ಕಥೆಯಲ್ಲಿ ಬದುಕಿನ ಸಾರ್ಥಕತೆಯ ಅಳತೆಗೋಲುಗಳು ಯಾವುವು? ನಾವು ಎಷ್ಟು ವರ್ಷ ಬದುಕಿದೆವು ಎನ್ನುವುದೊ? ಹೇಗೆ ಬದುಕಿದೆವು ಎನ್ನುವುದೊ? ಎಂಬ ಪ್ರಶ್ನೆಗಳನ್ನು ಎತ್ತಿದ್ದರು. ಅದೇ ರೀತಿ ಅವರ ಮತ್ತೊಂದು  “ ಲೇಖಕನ ರಾಜಿನಾಮೆಎಂಬ ಕಥೆಯಲ್ಲಿ ನಾವು ಬರೆದ ಬರೆವಣಿಗೆ ಸಹೃದಯ ಲೇಖಕರ ಸ್ಪಂದನಕ್ಕೆ ಒಳಗಾಗದೆ, ಕಪಾಟುಗಳಲ್ಲಿ ಬರಿದೇ ಗೆದ್ದಲು ಹಿಡಿಯುತ್ತಾ ಹೋದರೆ, ಬರೆವಣಿಗೆಯ ಸಾರ್ಥಕತೆ ಏನು ಎಂಬ ಪ್ರಶ್ನೆಯಿದೆ. ಎಲ್ಲಾ ಪ್ರಶ್ನೆಗಳು ಕೇವಲ ಲೇಖಕರ ಕಥೆಗಳ ಪ್ರಶ್ನೆಯಾಗಿರದೆ, ಅವರ ಬದುಕಿನ ಪ್ರಶ್ನೆಗಳಾಗಿದ್ದವು ಎಂಬುದಕ್ಕೆ  ಆತ್ಮಕಥನದ ಬರಹಗಳು ನಮಗೆ ಪುರಾವೆ ಒದಗಿಸುತ್ತವೆ. ನಿಟ್ಟಿನಲ್ಲಿ ಲೇಖಕರ ಬದುಕು ಮತ್ತು ಬರೆವಣೆಗೆ ಎರಡೂ ಸಾರ್ಥಕವಾಗಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

( ಸಮಾಹಿತ, ದ್ವೈಮಾಸಿಕ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)