ಶನಿವಾರ, ನವೆಂಬರ್ 18, 2023

ವನ್ಯಜೀವಿಗಳ ಮರಣ ಮೃದಂಗ

 



ಮೂರು ವರ್ಷಗಳ ಹಿಂದೆ 2020 ಜೂನ್ ತಿಂಗಳಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆಹಾರವನ್ನು ಅರಸಿಕೊಂಡು ಕೃಷಿ ಭೂಮಿಗೆ ಬಂದಿದ್ದ ಗರ್ಭ ಧರಿಸಿದ್ದ ಹೆಣ್ಣಾನೆಯೊಂದು ಕೃಷಿ ಭೂಮಿಯಲ್ಲಿ ಕಾಡು ಹಂದಿಗಳಿಗಾಗಿ ಇರಿಸಿದ್ದ ಸ್ಪೋಟಕ ತುಂಬಿದ್ದ ಅನಾನಸ್ ಹಣ್ಣನ್ನು ತಿನ್ನಲು ಹೋಗಿ  ಆನೆಯ ಬಾಯಿಯು ಸ್ಟೋಟದಿಂದ ಛಿದ್ರಗೊಂಡಿತು. ನೋವನ್ನು ತಾಳಲಾರದ ಮೂಕಪ್ರಾಣಿಯು ಸಮೀಪದ ನದಿಯೊಂದರಲ್ಲಿ ನಾಲ್ಕು ದಿನಗಳ ಕಾಲ ಹಗಲು ರಾತ್ರಿ ನಿಂತು ಅಂತಿಮವಾಗಿ ಪ್ರಾಣಬಿಟ್ಟಿತು. ಆ ಮೂಕ ಪ್ರಾಣಿಯ ದಾರುಣ ಸಾವು   ನೆಲದ ಪ್ರತಿಯೊಬ್ಬ ಪ್ರಜ್ಞಾವಂತನ್ನು ಕೇವಲ ಕ್ಷಣ ಮಾತ್ರವಲ್ಲದೆ ಹಲವು ದಿನಗಳ ಕಾಲ ಕಾಡಿದ್ದು ನಿಜ. ವನ್ಯ ಜೀವಿಗಳನ್ನು ನಾಡಿನಿಂದ ಕಾಡಿಗೆ  ಓಡಿಸಲು ನಾಗರೀಕ ಸಮಾಜ ಅನುಸರಿಸುತ್ತಿರುವ  "ಅನಾಗರಿಕ ಮತ್ತು ಕ್ರೂರ ಮಾರ್ಗಗಳ" ನಡುವಳಿಯನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು  ಇದೀಗ  ದೇಶದ  ಸರ್ವೋಚ್ಛ ನ್ಯಾಯಾಲಯವನ್ನು ತಲುಪಿದೆ. 2019 ರಲ್ಲಿ ತಮಿಳುನಾಡಿನ ನೀಲಗಿರಿಯ ಬಳಿ ಚಹಾ ತೋಟವೊಂದರಲ್ಲಿ  ನಾಲ್ಕು ವರ್ಷದ ಗಂಡಾನೆಯೊಂದನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.
 ಭಾರತದಲ್ಲಿ ಶತಮಾನಗಳದುದ್ದಕ್ಕೂ  ಮಾನವನೊಂದಿಗೆ ವಿಶೇಷ ಸಂಬಂಧವನ್ನು ಹಂಚಿಕೊಳ್ಳುತ್ತಾ  ಬಂದಿರುವ ಆನೆಯಂಬ ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮ ಜೀವಿಯನ್ನು .ಆಧುನಿಕ ಜಗತ್ತು ಅತ್ಯಂತ ಲಘುವಾಗಿ ಪರಿಗಣಿಸಿದೆ.   ಜಗತ್ತಿನ ಇತಿಹಾಸದಲ್ಲಿ  ನಡೆದಿರುವ ಕದನಗಳಲ್ಲಿ  ಸೈನಿಕರೆಂಬ ಮನುಷ್ಯರಷ್ಟೇ ಹತರಾಗಿಲ್ಲ. ಅವರುಗಳ ಅರ್ಧದಷ್ಟು ಸಂಖ್ಯೆಯ ಆನೆಗಳು ಮತ್ತು ಕುದುರೆಗಳು ಸಹ ಮೃತಪಟ್ಟಿವೆ. ಆದರೆ, ಮೂಕ ಪ್ರಾಣಿಗಳ ಸಾವಿನ ಸಂಖ್ಯೆಯನ್ನೂ ಯಾವ ಇತಿಹಾಸಕಾರನೂ ಅಧಿಕೃತವಾಗಿ ದಾಖಲಿಸಿಲ್ಲ.  ಅಸಂಖ್ಯಾತ ವನ್ಯಮೃಗಗಳ ತೊಟ್ಟಿಲು ಎನಿಸಿಕೊಂಡ ಭಾರತದಲ್ಲಿ   ಆನೆಗಳು ಮಾತ್ರವಲ್ಲದೆ ವನ್ಯ ಲೋಕದ ಸಕಲೆಂಟು ಜೀವಗಳಿಗೆ ಮತ್ತು ಪಕ್ಷಿಲೋಕಕ್ಕೆ  ತೀರಾ ಅಗತ್ಯವೆನಿಸಿದ ಗಂಭೀರವಾದ ಸಂರಕ್ಷಣೆ ಮತ್ತು ನಿರ್ವಹಣೆಯ ಗಮನವನ್ನುಅರಣ್ಯ ಇಲಾಖೆ  ಇನ್ನೂ ನೀಡಲಾಗಿಲ್ಲ. ಘಟನೆ ಕುರಿತಂತೆ   ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವರು ‘’ ಆನೆಯನ್ನು ಅಂತಹ ಕ್ರೂರ ರೀತಿಯಲ್ಲಿ ಕೊಲ್ಲುವುದು ಖಂಡಿತವಾಗಿಯೂಭಾರತೀಯ ಸಂಸ್ಕೃತಿಯಲ್ಲಿಲ್ಲ. ಎಂದು ಹೇಳಿರುವ ಮಾತು ಲೋಕಸಭೆಯಲ್ಲಿ ಪ್ರಸ್ತಾಪವಾದರೂ ಸಹ  ವನ್ಯಜೀವಿಗಳು ಮತ್ತು ಜನರ ನಡುವಿನ ಇಂತಹ ಸಂಘರ್ಷಗಳು ಏಕೆ  ಉಲ್ಬಣಗೊಳ್ಳುತ್ತವೆ? ಎಂಬುದರ ಬಗ್ಗೆ ಈವರೆಗೆ ನಮ್ಮನ್ನಾಳುವ ಜನಪ್ರತಿನಿಧಿಗಳು ಇನ್ನೂ ಗಂಭೀರವಾಗಿ ಆಲೋಚಿಸಿಲ್ಲ.


ಆಧುನಿಕ ಭಾರತದಲ್ಲಿ ವನ್ಯಜೀವಿ ಮತ್ತು ಮನುಷ್ಯರ ನಡುವಿನ ಸಂಘರ್ಷವು ದಿನನಿತ್ಯದ ಕ್ರಿಯೆ ಎಂಬಂತಾಗಿದೆ. ಋತುಮಾನಗಳಿಗೆ  ಅನುಸಾರವಾಗಿ  ನೀರು ಮತ್ತು  ಆಹಾರವನ್ನು  ಅರಸಿಕೊಂಡು ಕಾಡಿನಿಂದ ಕಾಡಿಗೆ ಅಥವಾ ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದ ಹುಲಿ, ಚಿರತೆ ಮತ್ತು ಆನೆಗಳು ಇತ್ತೀಚೆಗೆ ನಾಡಿನತ್ತ ಮುಖಮಾಡಿವೆ. ನಾಡಿನಲ್ಲಿ ಇರಬೇಕಾದ ಮನುಷ್ಯ ಕಾಡಿಗೆ ಲಗ್ಗೆ ಇಟ್ಟಿದ್ದಾನೆ. ರೆಸಾರ್ಟ್, ಸಪಾರಿ, ಅರಣ್ಯ ವೀಕ್ಷಣೆ ಮುಂತಾದವುಗಳ ನೆಪದಲ್ಲಿ ಅವುಗಳ ಆವಾಸಸ್ಥಾನದಲ್ಲಿ ಬೀಡುಬಿಟ್ಟು ವನ್ಯ ಜೀವಿಗಳ ಸಹಜ ಬದುಕಿಗೆ ಧಕ್ಕೆ ತಂದಿದ್ದಾನೆ. ಇಪ್ಪತ್ತೊಂದನೆಯ ಶತಮಾನದ ಆಧುನಿಕ ಜಗತ್ತು ಮತ್ತು ತಂತ್ರಜ್ಞಾನದ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ಮನುಷ್ಯನ ಶ್ರೇಯೋಭಿವೃದ್ಧಿಗೆ ಇರುವ ಏಕೈಕ ಸೂತ್ರ ಎಂಬ ಸ್ವಾರ್ಥದ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ.

ಇಂದು ದೇಶಾದ್ಯಂತ ವಿಸ್ತರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳು ವನ್ಯಜೀವಿಗಳ ಪಾಲಿಗೆ ಸಾವಿನ ಕೂಪಗಳಾಗಿ ಪರಿಣಮಿಸಿವೆ. ಅವುಗಳ ಸಹಜ ಕಿರುದಾರಿ ಎಂದು ಕರೆಯುವ ಆನೆಗಳ ಕಾರಿಡಾರ್ ಮಾರ್ಗವು  ಹೆದ್ದಾರಿಯಿಂದ ಮುಚ್ಚಿಹೋಗುತ್ತಿದೆ. ಇತ್ತೀಚೆಗೆ ಮೈಸೂರು ಮತ್ತು ಬೆಂಗಳೂರು ನಡುವೆ ನಿರ್ಮಿಸಲಾದ ಹೊಸ ರಾಷ್ಟ್ರೀಯ ಹೆದ್ದಾರಿಯಿಂದ ರಾಮನಗರದ  ಬಳಿ ಗುಡ್ಡಗಳಲ್ಲಿ ವಾಸಿಸುತ್ತಿದ್ದ  ಕರಡಿ, ನರಿ, ಮೊಲ, ಮುಂತಾದ ಪ್ರಾಣಿಗಳು ಆಹಾರಕ್ಕಾಗಿ ರಸ್ತೆ ದಾಠಲಾಗದೆ ಹಸಿವು ಮತ್ತು ನೀರಡಿಕೆಯಿಂದ ಅಸು ನೀಗುತ್ತಿವೆ.  ಹುಬ್ಬಳ್ಳಿ ಮತ್ತು ಗೋವಾ ನಡುವಿನ ರೈಲ್ವೆ ಮಾರ್ಗದಲ್ಲಿ ದಾಂಡೇಲಿ ಅಭಯಾರಣ್ಯದ ಕಾಡುಕೋಣಗಳ ಸ್ಥಿತಿ ಕೂಡಾ ಇದೇ ಆಗಿದೆ. ಕನಿಷ್ಠ ತಿಂಗಳಿಗೆ ಒಂದು ಅಥವಾ ಎರಡು ಪ್ರಾಣಿಗಳು ರೈಲಿಗೆ ಸಿಲುಕಿ ಸಾಯುತ್ತಿವೆ.

ಇಂದು ಕರ್ನಾಟಕ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಆನೆ, ಹುಲಿ ಮತ್ತು ಚಿರತೆಗಳ ದಾಳಿಯಿಂದ ವರ್ಷವೊಂದಕ್ಕೆ ಕನಿಷ್ಠ ಐನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಾಣಿಗಳಿಗೆ ರಾಗಿಮುದ್ದೆ ಹಾಗೂ ಮಾಂಸ ಮತ್ತು  ಇತರೆ ಆಹಾರಗಳಲ್ಲಿ ವಿಷ ಬೆರಸುವುದು, ಕೃಷಿ ಭೂಮಿಗೆ ಹಾಕಲಾದ ತಂತಿಗಳಿಗೆ ವಿದ್ಯುತ್ ಹಾಯಿಸುವುದು, ಹೆದ್ದಾರಿ ಮತ್ತು ರೈಲ್ವೆ ಮಾರ್ಗದಲ್ಲಿ  ನಡೆಯುವ ಅಪಘಾತ ಇವುಗಳ ಮೂಲಕ ವರ್ಷವೊಂದಕ್ಕೆ ಕನಿಷ್ಠ ಹನ್ನೆರೆಡು ಸಾವಿರ ವನ್ಯಜೀವಿಗಳು ಸಾವನ್ನಪ್ಪುತ್ತಿವೆ.  ಭಾರತದಲ್ಲಿ ಪ್ರತಿವರ್ಷ ಅಸ್ವಾಭಾವಿಕಕವಾಗಿ  ಐವತ್ತರಿಂದ ಅರವತ್ತು ಆನೆಗಳು ಅಸುನೀಗಿದರೆ,  2017-18 ಮತ್ತು 2020-21 ನಡುವೆ  ನಾಲ್ಕು ಸಿಂಹ ಹಾಗೂ  ಎಪ್ಪತ್ಮೂರು ಆನೆಗಳು ಸೇರಿದಂತೆ  ಒಟ್ಟು 63,345 ವನ್ಯ ಜೀವಿಗಳ ಸಾವಿನ ಪ್ರಕರಣಗಳು ಸಂಭವಿಸಿವೆ ಎಂದು ಕಂಟ್ರೋಲರ್ ಆಫ್ ಆಡಿಟರ್ ಜನರಲ್ ಸಂಸ್ಥೆ (ಸಿಎಜಿ)  ತನ್ನ ವರದಿಯಲ್ಲಿ  ದಾಖಲಿಸಿದೆ.

ಹುಲಿಗಳ  ಜೀವಶಾಸ್ತ್ರಜ್ಞರಾದ ಉಲ್ಲಾಸ್ ಕಾರಂತರು ವನ್ಯ ಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷವನ್ನು ಕುರಿತು  2019 ರ ಜನವರಿಯ ‘’ ದ ಜರ್ನಲ್ ಆಫ್ ಗೌವರ್ನೆನ್ಸ್’’ ಪತ್ರಿಕೆಯಲ್ಲಿ ಹೀಗೆ ದಾಖಲಿಸಿದ್ದರು ‘’ಇಲ್ಲಿಯವರೆಗಿನ  ಅರಣ್ಯ ಇಲಾಖೆಯ ಕ್ರಮಗಳು ಬಹುಮಟ್ಟಿಗೆ ಪ್ರತಿಕ್ರಿಯಾತ್ಮಕವಾಗಿವೆ ಆದರೆ, ವನ್ಯಜೀವಿ ಸಂರಕ್ಷಣೆ ಮತ್ತು ಸಂಘರ್ಷ ತಡೆಗಟ್ಟುವಲ್ಲಿ ಮತ್ತು   ಸ್ಪಷ್ಟವಾದ ಗುರಿ ಸಾಧಿಸುವಲ್ಲಿ ಅವುಗಳು  ನಿಖರವಾದ ಯೋಜನೆಗಳನ್ನು ಹೊಂದಿಲ್ಲ. ಇದರ  ಪರಿಣಾಮವಾಗಿ   ಘರ್ಷಣೆಗಳು ಸಹಿಷ್ಣುತೆಯ ಮಟ್ಟವನ್ನು ಮೀರಿ  ಉಲ್ಬಣಗೊಳ್ಳುತ್ತಿವೆ.  ಈವರೆಗೆ  ವನ್ಯಜೀವಿ-ಮಾನವ ಸಂಘರ್ಷಗಳನ್ನು ಎದುರಿಸಲು ನಿರ್ವಹಣಾ ಆಯ್ಕೆಗಳ ಮಾದರಿಯನ್ನು   ತರ್ಕಬದ್ಧವಾಗಿ ಚರ್ಚಿಸಲಾಗಿಲ್ಲ, ಪ್ರಾಣಿಗಳ ಜೀವಶಾಸ್ತ್ರದ ಬಗ್ಗೆ ವಿಜ್ಞಾನವು ನಮಗೆ ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿ, ನಿಯಮಿತವಾಗಿ ಸಂಘರ್ಷಗಳನ್ನು ಎದುರಿಸಬೇಕಾದ ವನ್ಯಜೀವಿ ವ್ಯವಸ್ಥಾಪಕರ  ಅಗತ್ಯತೆಗಳು  ಮತ್ತು ಮಧ್ಯಸ್ಥಗಾರರ ಅಭಿಪ್ರಾಯಗಳನ್ನು  (ಸಾಮಾನ್ಯವಾಗಿ ರೈತರು, ಬುಡಕಟ್ಟು ಜನರು ಮತ್ತು ಇತರ ಗ್ರಾಮೀಣ ಜನರು)  ಸಂಗ್ರಹಿಸುವ ಅಗತ್ಯವಿದೆ ಜೊತೆಗೆ ಪ್ರತಿಯೊಂದು ವನ್ಯಜೀವಿ ಪ್ರಭೇದಗಳ ರಕ್ಷಣೆಯು ಸಾಂಸ್ಕೃತಿಕ ಮಹತ್ವ ಪಡೆಯಬೇಕಿದೆ’’

ದುರಂತದ ಸಂಗತಿಯೆಂದರೆ, ಈ ದೇಶದಲ್ಲಿ ವನ್ಯಜೀವಿ ಸಂರಕ್ಷಣಾ ಕಾರ್ಯಸೂಚಿಯು ಇಂದಿಗೂ ಸಹ ದೆಹಲಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ  ಉತ್ಕೃಷ್ಟ ಮನಸ್ಥಿತಿಯಿಂದ ರೂಪಿಸಲ್ಪಡುತ್ತದೆ, ಅರಣ್ಯ ಪ್ರದೇಶಗಳ ಹೊರಗಿನ ಕೃಷಿ ಪ್ರದೇಶದಲ್ಲಿ  ಕಾಡು ಹಂದಿಗಳ ಸಂತತಿಯನ್ನು ವನ್ಯಜೀವಿ ಅಧಿಕಾರಿಗಳು ಕಾನೂನುಬದ್ಧವಾಗಿ ನಿಯಂತ್ರಣದಲ್ಲಿಟ್ಟುಕೊಂಡಿದ್ದರೆ,  ಹೆಚ್ಚು ಸಂವೇದನಾಶೀಲ ಆನೆಯಂತಹ ಜೀವಿಗಳಿಗೆ ಹಾನಿಯನ್ನುಂಟುಮಾಡುವ ಸ್ಫೋಟಕ ತುಂಬಿದ ತೆಂಗಿನಕಾಯಿ ಅಥವಾ ಅನಾನಸ್ ಮತ್ತು ಹಲಸಿನ ಹಣ್ಣುಗಳ ಬಳಕೆಯನ್ನು ರೈತರು ಆಶ್ರಯಿಸುವ ಅಗತ್ಯ ಇರುತ್ತಿರಲಿಲ್ಲ. ಒಂದು ಸಮಸ್ಯೆಯನ್ನು ವಿವಿಧ ಆಯಾಮಗಳಲ್ಲಿ ಗುರುತಿಸುವ ಹಾಗೂ ಅದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳುವ   ಅಗತ್ಯವಿದೆ.



ಇತ್ತೀಚಿನ ದಿನಗಳಲ್ಲಿ ಆನೆಗಳನ್ನು ರೈಲ್ವೆ ಕಂಬಿಗಳನ್ನು ಅರಣ್ಯದ ಸುತ್ತ ಹಾಕುವುದರ ಮೂಲಕ ನಿಯಂತ್ರಿಸುವ ಪ್ರಯತ್ನ ನಡೆದಿದೆ. ಇತ್ತೀಚೆಗಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಹುಲಿ ಮತ್ತು ಆನೆಗಳ ಸಂತತಿ ವೃದ್ಧಿಸಿದೆ. ಕೇವಲ ಅಂಕಿ ಅಂಶವನ್ನು ಪ್ರಕಟಿಸಿ ಹೆಮ್ಮೆ ಪಟ್ಟುಕೊಳ್ಳುವುದಕ್ಕಿಂತ ಅವುಗಳಿಗೆ ಬದಲಾದ  ಹವಾಮಾನದಲ್ಲಿ ಅರಣ್ಯದಲ್ಲಿ ಯಥೇಚ್ಚವಾದ ಆಹಾರ ಮತ್ತು ನೀರು ಇದೆಯಾ? ಎಂದು ಅರಣ್ಯಾಧಿಕಾರಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಬಿಳಿಗಿರಿರಂಗನ ಬೆಟ್ಟ, ಮಹಾದೇಶ್ವರಬೆಟ್ಟ ಮತ್ತು ಬಂಡಿಪುರ ಅಭಯಾರಣ್ಯಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಲಂಟಾನ ಗಿಡದಿಂದಾಗಿ ಅರಣ್ಯದಲ್ಲಿ ಇತರೆ ಗಿಡಮರಗಳು ಇರಲಿ, ಹಸಿರು ಹುಲ್ಲು ಕೂಡಾ ಬೆಳೆಯುತ್ತಿಲ್ಲ.ಪ್ರತಿಬೇಸಿಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯ ಸಂಗತಿಯಾಗಿದೆ.

ಈ ವರ್ಷ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ವರದಿಯಲ್ಲಿ  ಭಾರತದ ಹದಿನೈದು ರಾಜ್ಯಗಳಲ್ಲಿ ಆನೆಗಳು ಇರುವ  ಪ್ರದೇಶದಲ್ಲಿ  ಆನೆ ಕಾರಿಡಾರ್ಗಳಲ್ಲಿ ಶೇಕಡಾ ನಲವತ್ತರಷ್ಟು   ಹೆಚ್ಚಳವನ್ನು ತೋರಿಸಿದೆ.  2010 ರಲ್ಲಿ  ಇದ್ದ ಎಂಬತ್ತೆಂಟು ಆನೆ ಕಾರಿಡಾರ್ಗಳ ಸಂಖ್ಯೆಯನ್ನು ನೂರೈವತ್ತಕ್ಕೆ  ಏರಿಕೆ ಮಾಡಲಾಗಿದೆ ದೇಶದಲ್ಲಿ ಆನೆಗಳ ಸಂಖ್ಯೆ ಮುವತ್ತು ಸಾವಿರಕ್ಕಿಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.  ಕರ್ನಾಟಕ ರಾಜ್ಯದಲ್ಲಿ ಒಂಬತ್ತು ಹೊಸ ಆನೆ ಕಾರಿಡಾರ್ಗಳನ್ನು ಗುರುತಿಸಲಾಗಿದ್ದು  ಅವುಗಳು ಹೀಗಿವೆ. ಕರಡಿಕಲ್-ಮಾದೇಶ್ವರ ( ಇದನ್ನು ರಾಗಿಹಳ್ಳಿ ಕಾರಿಡಾರ್ ಎಂದೂ ಸಹ ಕರೆಯುತ್ತಾರೆ), ತಾಳಿ-ಬಿಳಿಕ್ಕನ್ (ತಮಿಳುನಾಡು ಮತ್ತು ಕರ್ನಾಟಕ), ಬಿಳಿಕಲ್-ಜವಳಗಿರಿ (ತಮಿಳುನಾಡು ಮತ್ತು ಕರ್ನಾಟಕ), ಎಡಯಹಳ್ಳಿ-ಗುತ್ತಿಯಾಲತ್ತೂರು (ತಮಿಳುನಾಡು-ಕರ್ನಾಟಕ), ಎಡೆಯಹಳ್ಳಿ-ದೊಡ್ಡಸಮಳ್ಳಿ- , ಚಾಮರಾಜನಗರ-ತಲಮಲೈ ಪುಂಜೂರು (ಕರ್ನಾಟಕ ಮತ್ತು ತಮಿಳುನಾಡು), ಚಾಮರಾಜನಗರ-ತಲಮಲೈ ಮುದ್ದಹಳ್ಳಿಯಲ್ಲಿ (ತಮಿಳುನಾಡು ಮತ್ತು ಕರ್ನಾಟಕ), ಕಣಿಯನಪುರ-ಮೊಯಾರ್ (ಕರ್ನಾಟಕ) ಮತ್ತು ಬೇಗೂರು-ಬ್ರಮ್ಮನಗಿರಿ (ಕರ್ನಾಟಕ ಮತ್ತು ಕೇರಳ) ಹೊಸ ಕಾರಿಡಾರ್ ಗಳ ಜೊತೆಗೆ ಪ್ರಾಣಿಗಳ ಚಲನ ವಲನದ ಬಗ್ಗೆ ಅರಣ್ಯ ಇಲಾಖೆ  ತೀವ್ರ ನಿಗಾ ವಹಿಸುವ ಅಗತ್ಯವಿದೆ.

ಕೇರಳದ ತ್ರಿಸ್ಸೂರು ಜಿಲ್ಲೆಯಲ್ಲಿರುವ  ಅರಣ್ಯ ಸಂಶೋಧನಾ ಕೇಂದ್ರದ ಇ.ಎ. ಜಯ್ಸನ್ ಎಂಬುವರು 2018 ರಲ್ಲಿ ಮಲ್ಲಪುರಂ ಜಿಲ್ಲೆಯಲ್ಲಿ ನಡೆಸಿದ ಸಂಶೋಧನೆಯ ಫಲವಾಗಿ ವಾರ್ಷಿಕವಾಗಿ ರೈತರು ಪ್ರತಿ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹದಿನೈದು ಸಾವಿರ ಮೌಲ್ಯದ ಫಸಲನ್ನು  ವನ್ಯ ಜೀವಿಗಳ ಹಾವಳಿಯಿಂದ ಕಳೆದುಕೊಳ್ಳುತ್ತಿದ್ದಾರೆ ಎಂಬುದು ದೃಢಪಟ್ಟಿದೆ. ಕರ್ನಾಟಕದ ಚಿಕ್ಕಮಗಳೂರು, ಸಕಲೇಶಪುರ ಮತ್ತು ಆಲ್ದೂರು, ಕೊಡಗಿನ ವಿರಾಜಪೇಟೆ ಮತ್ತು ನಾಗರಹೊಳೆಯ ಸುತ್ತಮುತ್ತಲಿನ ಗ್ರಾಮಗಳ ರೈತರು ಕಾಫಿ, ಬಾಳೆ ಹಾಗೂ ವಿವಿಧ ತರಕಾರಿಗಳ ನಷ್ಟವನ್ನು ನಿರಂತರವಾಗಿ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ತಂತಿ ಬೇಲಿಗೆ ವಿದ್ಯುತ್ ಹಾಯಿಸುವುದರ ಮೂಲಕ, ಆನೆ, ಚಿರತೆ, ಮಂಗ, ಜಿಂಕೆಗಳ ಸಾವಿಗೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.



ಕಳೆದ ಅಕ್ಟೋಬರ್ ಹನ್ನೆರೆಡರಂದು ಕರ್ನಾಟಕ ಸರ್ಕಾರದ ಅರಣ್ಯ ಸಚಿವರು ‘’ಅಭಯಾರಣ್ಯಗಳ ವ್ಯಾಪ್ತಿ ಪ್ರದೇಶದ ಒಂದು ಕಿಲೊಮೀಟರ್ ದೂರದಲ್ಲಿ ರೆಸಾರ್ಟ್, ಫಾರಂ ಹೌಸ್, ಹಾಗೂ  ಕ್ಲಬ್ ಗಳಿಗೆ ಅನುಮತಿ ನೀಡಲಾಗುವುದು ಹಾಗೂ ನಾಗರಹೊಳೆಯ ಆರು ವಲಯಗಳ ವ್ಯಾಪ್ತಿಯಲ್ಲಿ ನೀಡುವ ಕುರಿತು ಪರಿಶೀಲಿಸಲಾಗುವುದು’’ ಎಂದು ಹೇಳಿರುವ ಮಾತು ವನ್ಯಜೀವಿಗಳ ಮಾರಣಹೋಮಕ್ಕೆ ಬರೆಯಲಾದ ಮುನ್ನುಡಿ ಎಂಬಂತಿದೆ. ಅರಣ್ಯ ರಕ್ಷಣೆ ಎಂದರೆ ವಿದೇಶಿ ತಳೀಗಳ ಕೃತಕ ಮರಗಳನ್ನು ಬೆಳೆಸಿ ಹಸಿರನ್ನು ಪ್ರತಿಬಿಂಬಿಸುವ ಕ್ರಿಯೆಯಲ್ಲ. ಅರಣ್ಯವೆಂಬುದು ಇರುವೆಯಿಂದ ಹಿಡಿದು, ಅಳಿಲು, ಮಂಗಗಳು, ಸರಿಸೃಪಗಳು , ಪಕ್ಷಿ ಸಂಕುಲ ಸೇರಿದಂತೆ ನೂರಾರು ಜೀವಿಗಳ ಅವಾಸಸ್ಥಾನ. ಅವುಗಳಿಗೆ ಬೇಕಾದ ಹಣ್ಣಿನ ಮರಗಳು, ಆನೆಗಳ ಮುಖ್ಯ ಆಹಾರವಾದ ಬಿದಿರು ಬೆಳೆಸುವುದರ ಜೊತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹೊಂಡಗಳ ನಿರ್ಮಾಣ ಇವೆಲ್ಲವೂ ತುರ್ತಾಗಿ  ಆಗಬೇಕಿದೆ.

ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗ್ರಾಮವಾಸಿಗಳನ್ನು ಹೊರತು ಪಡಿಸಿ, ಕನಿಷ್ಠ ಹತ್ತು  ಕಿಲೊಮೀಟರ್ ದೂರದವರೆಗೆ ಯಾವುದೇ ರೀತಿಯ ಮಾನವರ ಅನ್ಯ ಚಟುವಟಿಕೆಗೆ ಅವಕಾಶವನ್ನು ನಿಷೇಧಿಸಬೇಕಿದೆ. ಇಲ್ಲದಿದ್ದರೆ, ನಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಚಿತ್ರಗಳ ಮೂಲಕ ವನ್ಯಪ್ರಾಣಿಗಳಣ್ನು ನೋಡುವ  ದಿನಗಳು ದೂರವಿಲ್ಲ,. ಇದು ಸಧ್ಯದ ವರ್ತಮಾನದ ನೋವಿನ ಹಾಗೂ ದುರಂತದ  ಸಂಗತಿ.

( ಪ್ರಜಾವಾಣಿ ಭಾನುವಾರದ ಸಾಪ್ತಾಹಿಕ ಪುರಣಿಗೆಯಲ್ಲಿ ಪ್ರಕಟವಾದ ಲೇಖನ.  650 ಶಬ್ದಗಳಿಗೆ ಲೇಖನವನ್ನು ಸೀಮಿತಗೊಳಿಸಿದ್ದೆ. 950 ಶಬ್ದಗಳಲ್ಲಿ ಸಿದ್ಧಪಡಿಸಲಾಗಿದ್ದ ಸಂಪೂರ್ಣ ಲೇಖನ ಇದು)

ಎನ್.ಜಗದೀಶ್ ಕೊಪ್ಪ

 

 

ಶುಕ್ರವಾರ, ನವೆಂಬರ್ 17, 2023

ಬಡತನವೆಂಬ ಬೆನ್ನ ಹಿಂದಿನ ಮಸಿ


ಮೊನ್ನೆ ಅಯೋಧ್ಯೆ ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಲ್ಲಿನ ಸರಯೂ ನದಿಯ ದಂಡೆಯ ಮೇಲೆ 24 ಲಕ್ಷಗಳ ದೀಪವನ್ನು ಹಚ್ಚಿ ಜಾಗತಿಕ ದಾಖಲೆ ನಿರ್ಮಿಸಿದ್ದೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಗಮನಿಸಿದೆ. ಐದು ವರ್ಷದ ಹಿಂದೆ ಇಡೀ ದಿನ  ಪೌರಾಣಿಕ ಮತ್ತು ಐತಿಹಾಸಿಕ  ಹಿನ್ನಲೆಯುಳ್ಳ ಅಯೋಧ್ಯೆ ನಗರವನ್ನು ಕಾಲ್ನಡಿಗೆಯಲ್ಲಿ ಸುತ್ತಾಡಿ, ಸಂಜೆ ಐದುಗಂಟೆಯಿಂದ ಏಳು ಗಂಟೆಯವರೆಗೆ ಸರಯೂ ನದಿಯ ದಂಡೆಯ ಮೇಲೆ ಕಡಲೆ ಕಾಯಿ ತಿನ್ನುತ್ತಾ ಕುಳಿತಿದ್ದೆ.

ನದಿಯ ಹಿನ್ನಲೆಯಲ್ಲಿ ಕಾಣುತ್ತಿದ್ದ ಐತಿಹಾಸಿಕ ಕಟ್ಟಡಗಳನ್ನು ವೀಕ್ಷಿಸುತ್ತಾ ಕುಳಿತಿರುವಾಗ ನದಿಯ ಇಕ್ಕೆಲಗಳ ದಂಡೆಯ ಸೋಪಾನಗಳ ದುರಸ್ತಿ ಕಾರ್ಯ ಭರದಿಂದ ಸಾಗಿತ್ತು.  ಇಡೀ ನದಿಯ ತೀರವನ್ನು ಮತ್ತು ಮೆಟ್ಟಿಲುಗಳನ್ನು ಕೇಸರಿ ಬಣ್ಣದಿಂದ ಅಲಂಕರಿಸಲಾಗುತ್ತಿತ್ತು. ಇದು ಒಂದು ಐತಿಹಾಸಿಕ ನದಿಯ ಮೂಲ ಚಹರೆಯನ್ನು ಬದಲಾಯಿಸಿತ್ತು. ಎದೆಯೊಳಗಿನ ಸಂಕಟವನ್ನು ಯಾರಿಗೂ ಹೇಳಕೊಳ್ಳಲಾಗದೆ ಹತ್ತಿರದಲ್ಲಿದ್ದ ಬಸ್ ನಿಲ್ದಾಣದಿಂದ  ಎಂಟತ್ತು ಕಿಲೊಮೀಟರ್ ದೂರದ ಜಿಲ್ಲಾ ಕೇಂದ್ರವಾದ  ಪೈಜಾಬಾದ್ ನಗರಕ್ಕೆ ಬಂದು ಊಟ ಮಾಡಿ ಮಲಗಿದೆ.

ದೀಪೋತ್ಸವವನ್ನು ದೃಶ್ಯ ಮಾಧ್ಯಮಗಳಲ್ಲಿ ಜಾಗತಿಕ ಉತ್ಸವ  ಎಂಬಂತೆ ತೋರಿಸುತ್ತಿದ್ದಾಗ, ಕೆಲವರು ದ್ರೋಣ್ ಸಹಾಯದಿಂದ ದೃಶ್ಯವನ್ನು ಸೆರೆ ಹಿಡಿಯುವಾಗ ಬಡವರ ಮಕ್ಕಳು ದೀಪದಿಂದ ಎಣ್ಣೆಯನ್ನು ತಾವು ತಂದಿದ್ದ ಡಬ್ಬಗಳಿಗೆ ಸುರಿದುಕೊಂಡು ಓಡುತ್ತಿರುವ ದೃಶ್ಯಗಳೂ ಸಹ ಸೆರೆಯಾಗಿತ್ತು. ಅಂದರೆ, ಏಕಕಾಲಕ್ಕೆ ಭಾರತದ ಬಡತನ ಮತ್ತು ಧಾರ್ಮಿಕ ಪ್ರಭಾವದ ಆವೇಶ ಈ ಎರಡೂ ಅಂಶಗಳು ಜಗತ್ತಿಗೆ ಅನಾವರಣಗೊಂಡವು. ಭಾರತದ ಬಡತನವನ್ನು ಎಂತಹದ್ದೇ ಜಾಹಿರಾತು ಮತ್ತು ತಂತ್ರಗಾರಿಕೆಯ ಮಾತುಗಳಿಂದ ಮುಚ್ಚಿಕೊಳ್ಳಲು ಪ್ರಯತ್ನಿಸಿದರೆ ಅದು ಯಾವುದಾದರೂ ಒಂದು ಸನ್ನಿವೇಶದಲ್ಲಿ ಮತ್ತು ಒಂದು ರೂಪದಲ್ಲಿ ಈ ಜಗತ್ತಿನೆದುರು ಅನಾವರಣಗೊಳ್ಳುತ್ತದೆ.

ಹೂಸನ್ನು ಪರಿಮಳ ಎಂದು ಬಣ್ಣಿಸುವುದು ಸುಲಭ ಆದರೆ, ಅದರ ಕೆಟ್ಟ ಮತ್ತು ನೈಜ ವಾಸನೆಯನ್ನು ತಡೆದುಕೊಳ್ಳುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಇದೇ ನಡಾವಳಿಗಳು. ಇಂದಿನ ದಿನಗಳಲ್ಲಿ ಒಂದು ಕೆ.ಜಿ.ಅಕ್ಕಿ ಅರವತ್ತು ರೂಪಾಯಿ, ಒಂದು ಲೀಟರ್ ಸಾಮಾನ್ಯ ಅಡುಗೆ ಎಣ್ಣೆ ನೂರ ನಲವತ್ತು ರೂಪಾಯಿ, ಒಂದು ಕೇಜಿ ತೊಗರಿ ಬೇಳೆ ನೂರ ತೊಂಬತ್ತು ರೂಪಾಯಿ. ತರಕಾರಿ ಬೆಲೆಯಲ್ಲಿ ಯಾವೊಂದು ತರಕಾರಿಯು ಕೆ.ಜಿ.ಐವತ್ತು ರೂಪಾಯಿಗಿಂತ ಕಡಿಮೆ ಇಲ್ಲ. ಇಂತಹ  ದುರಿತ ಕಾಲದಲ್ಲಿ ಎರಡು ಮಕ್ಕಳನ್ನು ಹೊಂದಿರುವ ಒಬ್ಬ ಬಡಕೂಲಿ ಕಾರ್ಮಿಕನಿಗೆ ತನ್ನ ಕುಟುಂಬ ನಿರ್ವಹಣೆಗೆ ದಿವೊಂದಕ್ಕೆ ಕನಿಷ್ಠ ಮುನ್ನೂರು ರೂಪಾಯಿ ಬೇಕು. ಅಂದರೆ ತಿಂಗಳಿಗೆ ಒಂಬತ್ತು ಸಾವಿರ ನಿಗದಿತ ಆದಾಯ ಅವನಿಗೆ ಎಂದು ನಾವು ನಂಬಲು ಸಾಧ್ಯವೆ?

ಅಧಿಕಾರಸ್ಥರ ತುತ್ತೂರಿಗಳಾಗಿರುವ ಮಾಧ್ಯಮಗಳು ರಾಜಕೀಯ ನಾಯಕರು ಹೇಳುವ ಮಾತುಗಳಿಗೆ ಒಗ್ಗರಣೆ ಮತ್ತು ಮಸಾಲೆ ಹಾಕಿ ಅತ್ಯಂತ ರೋಚಕವಾಗಿ ಓದುಗರಿಗೆ ಮತ್ತು ವೀಖ್ಷಕರಿಗೆ ತಲುಪಿಸುತ್ತಿವೆ. ನಾವು ಅವುಗಳನ್ನು ನಂಬಿ ವಾಟ್ಸ್ ಅಪ್ ಮತ್ತು ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ರಾಜಕೀಯ ನಾಯಕರಿಗೆ ಜಗದೇಕವೀರನ ಪಟ್ಟ ಕಟ್ಟಿ ಕೊಂಡಾಡುತ್ತೇವೆ. ಏಕೆಂದರೆ, ನಮಗೆ ಮನೆಯಿದೆ.ಕಾರುಗಳಿವೆ. ನಿಗದಿತ ಆದಾಯವಿದೆ ಜೊತೆಗೆ ಸದಾ ನಮ್ಮನ್ನು ಮೈಮರೆಸುವಂತಹ ಕ್ರಿಕೇಟ್ ಪಂದ್ಯಗಳಿವೆ. ಬಿಗ್ ಬಾಸ್ ನಂತಹ ರೋಚಕ ಕಾರ್ಯಕ್ರಮಗಳಿವೆ ಇವೆಲ್ಲಕ್ಕಿಂತ ಹೆಚ್ಚಾಗಿ ಓ.ಟಿ.ಟಿ. ವೇದಿಕೆಯಲ್ಲಿ ಸೂಪರ್ ಸ್ಟಾರ್ ಗಳ ಸಿನಿಮಾಗಳಿವೆ. ದಿನ ನಿತ್ಯ ಸಾಯುವರ ಬಗ್ಗೆ ಯೋಚಿಸಲು ನಮಗೆ ಸಮಯವಿಲ್ಲ.

ಮಕ್ಕಳ ದಿನಾಚರಣೆ ಎಂದರೆ, ಭಾರತದ ಮೊದಲ ಪ್ರಧಾನಿ ನೆಹರೂ ಅವರ ಜನ್ಮದಿನಾಚರಣೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ.  ಆ ಪುಣ್ಯಾತ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನಗಳಲ್ಲಿ ಅವರ ಮುಂದೆ ಎರಡು ಸವಾಲುಗಳಿದ್ದವು. ಒಂದು ಕೋಮು ಸಂಘರ್ಷವನ್ನು ತಡೆಗಟ್ಟುವುದು ಮತ್ತು  ಎರಡನೆಯದು ಭಾರತೀಯರ ಬಡತನ ಮತ್ತು ಅನಕ್ಷರತೆಯನ್ನು ತೊಡೆದು ಹಾಕುವುದು ಜೊತೆಗೆ ಉದ್ಯೋಗ ಸೃಷ್ಟಿ ಮಾಡಬೇಕಾದ ಅನಿವಾರ್ಯ. ಈ ಕಾರಣದಿಂದ ಅವರು ಗಾಂಧೀಜಿಯವರ ವಿರೋಧವನ್ನು ಕಟ್ಟಿಕೊಂಡು, ಗಾಂಧಿಜಿಯವರ ಗುಡಿಕೈಗಾರಿಕೆಯ ಸಿದ್ಧಾಂತವನ್ನು ಬದಿಗೊತ್ತು ಮಹಾಲನೋಬಸ್ ಎಂಬ ಅರ್ಥಶಾಸ್ತ್ರಜ್ಞರ ನೆರವಿನಿಂದ ಸಣ್ಣ ಮತ್ತು ಭಾರಿ ಕೈಗಾರಿಕೆಗಳಿಗೆ ಒತ್ತು ನೀಡುವ ಆರ್ಥಿಕತೆಯನ್ನು ಜಾರಿಗೆ ತಂದರು.

ಇದರ ಪರಿಣಾಮವಾಗಿ ಹೆಚ್.ಎಲ್, ಐ.ಟಿ.ಐ.( ಇಂಡಿಯನ್ ಟೆಲಿಪೋನ್ ಇಂಡಸ್ತ್ರೀಸ್)  ಬಿ.ಇ.ಎಲ್. ಹೀಗೆ ಭಾರಿ ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದವು. ಇವುಗಳಿಗೆ ಪೂರಕವಾಗಿ ಐ.ಟಿ.ಐ. ವಿದ್ಯಾಸ್ಥೆಗಳು ಮತ್ತು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಹಾಗೂ ಇಂಡಿಯನ್ ಮೆಡಿಕಲ್ ಕಾಲೇಜುಗಳು ಅಸ್ತಿತ್ವಕ್ಕೆ ಬಂದವು. ಇಂದು ಸಾಮಾಜಿಕ ತಾಣಗಳಲ್ಲಿ ನೆಹರೂ ಕುರಿತಂತೆ ವಿಷ ಕಕ್ಕುತ್ತಿರುವ ಮಿಡಿನಾಗರಗಳಿಗೆ ನಮ್ಮ ಅಪ್ಪಂದಿರು  ನೆಹರೂ ಸೃಷ್ಟಿಸಿದ ಕೈಗಾರಿಕೆಗಳಿಂದ ಬದುಕು ಕಟ್ಟಿಕೊಂಡವರು ಮತ್ತು ಮಕ್ಕಳನ್ನು ಓದಿಸಿದವರು ಎಂಬುದು ಮರೆತು ಹೋಗಿದೆ.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರು ವ ಕೇರಳ ಮೂಲದ ಸುಜಿತ್ ಕುಮಾರ್ ಅವರ ಈ ಚಿತ್ರವನ್ನು ನೋಡಿ ಹಳೆಯ ನೆನಪುಗಳು ಮರುಕಳಿಸಿದವು.

ಜಗದೀಶ್ ಕೊಪ್ಪ


ಮಂಗಳವಾರ, ನವೆಂಬರ್ 7, 2023

ರಂಗನಾಯಯಕಿ ಅಮ್ಮಾಳ್ ಎಂಬ ಲಿಂಗ ಅಸಮಾನತೆಯನ್ನು ಮುರಿದ ಮೊದಲ ಮಹಿಳಾ ವಾದ್ಯಗಾರ್ತಿ


May be an image of 1 person and musical instrument
ಇಪ್ಪತ್ತೊಂದನೆಯ ಶತಮಾನದ ಆಧುನಿಕ ಯುಗದಲ್ಲಿ ಮಹಿಳೆ ಪುರುಷ ನಸಮಾನವಾಗಿ ಬೆಳೆದು ನಿಂತಿದ್ದಾಳೆ. ಮಹಿಳೆಯರು ನಿರ್ವಹಿಸುವ ಕಾರ್ಯಗಳಲ್ಲ ಎಂದು ಪರಿಗಣಿಸಿದ್ದ ವಿಮಾನ ಚಾಲನೆ, ರೈಲು ಚಾಲನೆ ಹಾಗೂ ಟ್ರಕ್ ಮತ್ತು ಆಟೋಗಳ ಚಾಲನೆಯಲ್ಲಿ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇದಕ್ಕೆ ಪ್ರೇರಣೆಯಾಗಿ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕರ್ನಾಟಕ ಸಂಗೀತದ ಲೋಕದಲ್ಲಿ ಮಹಿಳೆಯರು ನುಡಿಸುವ ವಾದ್ಯಗಳಲ್ಲ ಎಂಬ ತೀರ್ಮಾನದಲ್ಲಿ ಪುರುಷ ಜಗತ್ತು ಮುಳುಗಿರುವಾಗ ನಾದಸ್ವರ ವಾದನದಲ್ಲಿ ಪೊನ್ನಮಾಳ್ ಮತ್ತು ಮೃದಂಗ ವಾದನ ಕಲೆಯಲ್ಲಿ ರಂಗನಾಯಕಿ ಅಮ್ಮಾಳ್ ಹೊಸ ಇತಿಹಾಸವನ್ನು ಬರೆದರು.
ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಮಹಿಳಾ ಕಲಾವಿದರು ಮೃದಂಗ, ನಾದಸ್ವರ, ತಬಲ, ಗೋಟು ವಾದ್ಯ ಮುಂತಾದ ಕಲೆಗಳಲ್ಲಿ ನೈಪುಣ್ಯತೆಯನ್ನು ಸಾಧಿಸುವುದರ ಮೂಲಕ ಪುರುಷರ ಸಮಾನವಾಗಿ ಬೆಳೆದು ನಿಂತಿದ್ದಾರೆ.
ರಂಗನಾಯಕಿ ಅಮ್ಮಾಳ್ ಸಾಧನೆಯ ಇತಿಹಾಸವು 1927 ರಿಂದ ಆರಂಭವಾಗಿ ಇತಿಹಾಸದಲ್ಲಿ ದಾಖಲಾಗಿದೆ. ರಂಗನಾಯಕಿ ಅಮ್ಮಾಳ್ ಹದಿನೇಳು ವರ್ಷ ಪ್ರಾಯದ ಯುವತಿಯಾಗಿದ್ದಾಗ ಮದ್ರಾಸ್‌ ನಗರದಲ್ಲಿ ನಡೆದ ಅಖಿಲ ಭಾರತ ಕಾಂಗ್ರಸ್ ಅಧಿವೇಶನದ ನಿಮಿತ್ತ ಆಯೋಜಿಸಿದ್ದ ಸಂಗೀತ ಸಮ್ಮೇಳನದಲ್ಲಿ ಮೃದಂಗ ವಾದಕಿಯಾಗಿ ಭಾಗವಹಿಸಿದಾಗ ಅಲ್ಲಿ ಹೊಸ ಮಹಿಳಾ ಇತಿಹಾಸ ಸೃಷ್ಟಿಯಾಯಿತು.
ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಪ್ಪತ್ಮೂರು ಮಂದಿ ಮೃದಂಗ ಕಲಾವಿದರ ಪೈಕಿ ರಂಗನಾಯಕಿಯವರು ಏಕೈಕ ಮಹಿಳಾ ಕಲಾವಿದೆಯಾಗಿದ್ದರು. ಈ ಕಾರಣದಿಂದಾಗಿ ಟಿ. ಎಸ್. ರಂಗನಾಯಕಿ ಅಮ್ಮಾಳ್ ಅವರು 1930 ರ ದಶಕದ ಹಿಂದೆಯೇ ಮೃದಂಗ ಕಲಾವಿದರಾಗಿ ಪ್ರಸಿದ್ಧಿ ಪಡೆದರು. ಕರ್ನಾಟಕ ಸಂಗೀತದ ತಾಳವಾದ್ಯದ ಪುರುಷ ಪ್ರಧಾನ ಜಗತ್ತಿನಲ್ಲಿ ಯಶಸ್ಸನ್ನು ಸಾಧಿಸಿದ ಮೊದಲ ಮಹಿಳೆ ಎಂದು ಪ್ರಸಿದ್ಧಿಯಾದರು.
ಪುರುಷರು ಮಾಡುವ ಯಾವುದನ್ನೂ ಮಹಿಳೆಯರಿಗೆ ಅನುಮತಿಸದ ಇದ್ದ ಆ ಕಾಲಘಟ್ಟದಲ್ಲಿ, ಈ ಚಿಕ್ಕ ಹುಡುಗಿಯೊಬ್ಬಳು ಮೃದಂಗವನ್ನು ನುಡಿಸುವಲ್ಲಿ ಪ್ರಯತ್ನಿಸಿ ಯಶಸ್ಸು ಸಾಧಿಸಿದ್ದು ಸಾಮಾನ್ಯ ಸಂಗತಿಯಲ್ಲ. ರಂಗನಾಯಕಿ ಅಮ್ಮಾಳ್ ಅವರ ತಂದೆ ತಿರುಕೋಕರ್ಣಂ ಶಿವರಾಮನ್ ಅವರು ಪುದುಕೋಟೈ ಸಂಸ್ಥಾನದಲ್ಲಿ ಆಸ್ಥಾನ ವಿದ್ವಾನ್ ಹಾಗೂ ಪ್ರತಿಷ್ಠಿತ ನಟುವನಾರ್ ಅಂದರೆ ನೃತ್ಯ ಶಿಕ್ಷಕ ಅಥವಾ ಗುರುವಾಗಿ ಹೆಸರು ಪಡೆದ್ದರು. ಅವಧಾನ ಪಲ್ಲವಿಗಳ ಪಾಂಡಿತ್ಯಕ್ಕಾಗಿ ಅವರು ಹೆಸರುವಾಸಿಯಾಗಿದ್ದರು. ಇದು ನೃತ್ಯದಲ್ಲಿ ಕೈಗಳನ್ನು ಮಾತ್ರವಲ್ಲದೆ ಕಾಲುಗಳು ಮತ್ತು ತಲೆಗಳನ್ನು ಬಳಸಿ ವೈವಿಧ್ಯಮಯ ತಾಳಎಂದುನು ಕೌಶಲ್ಯದಿಂದ ಪ್ರದರ್ಶಿಸುವ ಒಂದು ಕಲಾ ಪ್ರಕಾರವಾಗಿದೆ.
ದೇವದಾಸಿ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ ಪುದುಕೋಟೈ ಮೂಲ ದ ಖ್ಯಾತವೈದ್ಯೆ ಹಾಗೂ ಸಮಾ ಜ ಸುಧಾರಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಇವರ ಹತ್ತಿರ ಸಂಬಂಧಿಯಾಗಿದ್ದರು.
ಏಳು ಮಂದಿ ಒಡಹುಟ್ಟಿದವರ ಕುಟುಂಬದಲ್ಲಿ ರಂಗನಾಯಕಿ ಅಮ್ಮಾಳ್ ಅವರು 1910 ರ ಮೇ 10 ರಂದು ಎರಡನೇ ಮಗುವಾಗಿ ಜನಿಸಿದರು. ಅವರ ಸಹೋದರ ಉಲಗನಾಥನ್ ಪಿಳ್ಳೈ, ಪಿಟೀಲು ವಾದಕರಾಗಿದ್ದರು. ಹಿರಿಯ ಸಹೋದರಿ ಶಿವ ಬೃಂದಾದೇವಿ ಎಂಬುವರು ಶೈವಪರಂಪರೆಯ ಪೀಠವೊಂದರ ಅಧ್ಯಕ್ಷೆಯಾಗಿದ್ದರು.
ರಂಗನಾಯಕಿ ಅವರು ಬಾಲ್ಯದಿಂದಲೂ ಮೃದಂಗ ತಾಳಗಳ ಲಯ ಪರಾಕ್ರಮದಿಂದ ಪ್ರೇರಿತರಾದರು, ಮೃದಂಗವನ್ನು ಆಯ್ಕೆ ಮಾಢಿಕೊಂಡರು ಮತ್ತು ಬಾಲ್ಯದಲ್ಲಿ ಭರತನಾಟ್ಯದ ಶಿಕ್ಷಣವನ್ನು ಪಡೆಯುತ್ತಾ, ಮೃದಂಗದ ಶಿಕ್ಷಣವನ್ನು ಪಡೆಯುತ್ತಿದ್ದರು. ಅವರಿಗೆ ಹದಿಮೂರು ವರ್ಷವಾಗಿದ್ದಾಗ ಭರತನಾಟ್ಯದ ಅರಂಗೇಟ್ರಂ ( ನೃತ್ಯ ಪ್ರವೇಶ) ಕಾರ್ಯಕ್ರ ಮನಡೆಯಿತು. ಅವರ ನೃತ್ಯ ಕಾರ್ಯಕ್ರಮಕ್ಕೆ ತಂದೆಯವರ ಜೊತೆ ಮೃದಂಗಕ್ಕೆ ರಾಮಚಂದ್ರಪಿಳ್ಳೈ ಮತ್ತು ವಯಲಿನ್ ವಾದನಕ್ಕೆ ಇಕಪ್ಪೂರ್ ಮುನಿಸ್ವಾಮಿ ಪಿಳ್ಳೈ ಆಗಮಿಸಿದ್ದರು. ಇವರೆಲ್ಲರೂ ಪುದುಕೋಟೈ ಸಂಸ್ಥಾನದ ಸಂಗೀತಗಾರರಾಗಿದ್ದರು.
ಪುದುಕೋಟೈ ಸಂಸ್ಥಾನದಲ್ಲಿ ಮೃದಂಗ ವಾದನದಲ್ಲಿ ಶ್ರೇಷ್ಠ ಗುರುಗಳಲ್ಲಿ ಒಬ್ಬರಾಗಿದ್ದ ಪುದುಕೊಟ್ಟೈ ದಕ್ಷಿಣಾಮೂರ್ತಿ ಪಿಳ್ಳೈ ಅವರ ಬಳಿ ಹದಿಮೂರು ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಮೃದಂಗ ವಾದನದ ಅಭ್ಯಾಸ ಮಾಡಿದರು.
ರಂಗನಾಯಕಿ ಅಮ್ಮಾಳ್ ಅವರು ತಮಗೆ ಹದಿನೈದು ವರ್ಷವಾದಾಗ, ಭರತನಾಟ್ಯವನ್ನು ನಿಲ್ಲಿಸಿ ಮೃದಂಗ ವಾದನದ ಕಲೆಯತ್ತ ತೀವ್ರ ಆಸಕ್ತಿ ತಾಳಿದರು."ರಂಗನಾಯಕಿ ಅಮ್ಮಾಳ್ ಕೇವಲ ಎರಡು ವರ್ಷಗಳಲ್ಲಿ ಅದರ ನಾದದ ಗುಣಮಟ್ಟಕ್ಕೆ ತುಂಬಾ ಹೊಳಪನ್ನು ಸೇರಿಸಿದ್ದಾರೆ ಎಂದು ಸಂಗೀತ ವಿಮರ್ಶಕರು ಕೊಂಡಾಡಿದ್ದರು. ಮತ್ತೊಬ್ಬ ವಿಮರ್ಶಕರು ತನಿ ಆವರ್ತನದಲ್ಲಿ ಮೃದಂಗದ ಮೇಲಿನ ಅವರ ಚಳಕ ಕಾರ್ಯಕ್ರಮದ ಮುಖ್ಯಾಂಶವೆಂದು ಘೋಷಿಸಿದ್ದರು. ಸಂಗೀತ ಕೃತಿಯೊಂದಿಗಿನ ಅವರ ವಿಧಾನವನ್ನು ಮತ್ತು ಅದ್ಭುತ ಅಭಿನಯವನ್ನು ಶ್ಲಾಘಿಸಿದರು ಅವರು 1930 ದಶಕದಿಂದ ಪ್ರಸಿದ್ಧ ಕಲಾವಿದರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ಡಿಕೆ ಪಟ್ಟಮಾಳ್ ಅವರಂತಹ ಪ್ರಮುಖ ಗಾಯಕಿರ ಸಂಗೀತ ಕಚೇರಿಯಲ್ಲಿ ರಂಗನಾಯಕಿ ಅಮ್ಮಾಳ್ ಅವರು 1936 ರಲ್ಲಿ ಮೃದಂಗವನ್ನು ನುಡಿಸಿದರು.
ನಂತರದ ದಿನಗಳಳಲ್ಲಿ ಎಂ ಎಸ್ ಸುಬ್ಬಲಕ್ಷ್ಮಿ ಅವರ ತಾಯಿ ಮಧುರೈ ಷಣ್ಮುಗವಡಿವು ಅವರ ವೀಣಾ ವಾದನಕ್ಕೆ ಮೈಸೂರಿಗೆ ಬರಲು ಸಾಧ್ಯವಾಗದ ಕಾರಣ ಬದಲಿಗೆ ಮೈಸೂರು ಅರಮನೆಯಲ್ಲಿ ಮೊದಲ ಬಾರಿಗೆ ವೇದಿಕೆಯಲ್ಲಿ ಮೃದಂಗ ವಾದನ ಪ್ರದರ್ಶನ ನೀಡಿದರು. ಅವರ ಮೃದಂಗ ವಾದನದ ಕಲೆಗೆ ಎಲ್ಲರೂ ನಿಬ್ಬೆರಗಾದರು. ರಂಗನಾಯಕಿ ಅಮ್ಮಾಳ್ ಅವರು ಅರಿಯಕುಡಿ ರಾಮಾನುಜ ಅಯ್ಯಂಗಾರ್, ಟಿ ಆರ್ ಮಹಾಲಿಂಗಂ, ಮೈಸೂರಿನ ಪಿಟಿಲು ಚೌಡಯಾ ಮತ್ತು ವೀಣಾ ಧನಮ್ಮಾಳ್ ಸೇರಿದಂತೆ ಅನೇಕ ಸಂಗೀತ ದಿಗ್ಗಜರೊಂದಿಗೆ ಮೃದಂಗ ನುಡಿಸಿದ್ದಾರೆ.
ತನಿ ಆವರ್ತನಗಳು (ಸಂಗೀತದ ಸಮಯದಲ್ಲಿ (ಏಕವ್ಯಕ್ತಿ ಪ್ರದರ್ಶನ) ಮತ್ತು ಹೆಚ್ಚು ಸಂಕೀರ್ಣವಾದ ಜಾತಿಗಳು (ಬೀಟ್ ಮಾದರಿಗಳು) ಮತ್ತು ತೀರ್ಮಾನಗಳು (ಸಾಮಾನ್ಯವಾಗಿ ಮೂರು ಬಾರಿ ಆಡುವ ಅಂತ್ಯದ ಮಾದರಿ) ಸಮಯದಲ್ಲಿ ಸಂಕೀರ್ಣವಾದ ಲಯದ ಮಾದರಿಗಳನ್ನು ನೇಯ್ಗೆ ಮಾಡುವುದರ, ಮೂಲಕ ಅವರು ತನ್ನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿದ್ದರು.
ಪುದುಕೋಟೈಗೆ ಸಮೀಪದ ತಿರುಚ್ಚರಾಪಳ್ಳಿಯ ಆಕಾಶವಾಣಿಯ ಕೇಂದ್ರದಿಂದ ಅವರ ಮೃದಂಗವಾದನ ನಿರಂತರ ಪ್ರಸಾರಗೊಳ್ಳುತ್ತಿದ್ದಂತೆ ಅವರ ಜನಪ್ರಿಯತೆ ಎಲ್ಲೆಡೆ ಹಬ್ಬಿತು. ರಂಗನಾಯಕಿ ಅವರಿಗೆ ದೇಶ ವಿದೇಶಗಳಿಂದ ಆಮಂತ್ರಣಗಳು ಬರತೊಡಗಿದವು. ಅವರು ಸಿಂಗಾಪುರ, ಮಲೇಷಿಯಾ, ಶ್ರೀಲಂಕಾ ರಾಷ್ಟ್ರಗಳಿಗೆ ಕುಟುಂಬ ಸದಸ್ಯರ ಜೊತೆಗೆ ಹೋಗಿ ಪ್ರದರ್ಶನ ನೀಡಿ ಬಂದರು.
1966 ರಲ್ಲಿ ಅವರು ತಿರುಪತಿಯ ಪದ್ಮಾವತಿ ಸಂಗೀತದ ಕಾಲೇಜಿನಲ್ಲಿ ಅಧ್ಯಾಪಕರಾಗಿ .ನೇಮಕಗೊಂಡರು. ಅವರು ಏಳು ವರ್ಷಗಳ ನಂತರ ಮಧುರೈನ ಶ್ರೀ ಸದ್ಗುರು ಸಂಗೀತ ಸಭಾದಲ್ಲಿ ಅರೆಕಾಲಿಕ ಮೃದಂಗ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅವರು ತಿರುಚ್ಚಿಯ ಆಕಾಶವಾಣಿಯ ಕೇಂದ್ರದಲ್ಲಿ ಕಾರ್ಯಕ್ರಮ ನೀಡುವುದರ ಜೊತೆಗೆ ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದರು.
ಅವರು ತಿರುಪತಿಯ ಪದ್ಮಾವತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಭರತನಾಟ್ಯ ವಿದ್ಯಾರ್ಥಿಯಾಗಿದ್ದ ಗೊಟ್ಟುವಾದ್ಯಂ ವಾದಕಿ ಉಷಾ ವಿಜಯಕುಮಾರ್ ಎಂಬುವರು ತಮ್ಮ ಗುರುವಿನ ಬಗ್ಗೆ ‘’, ರಂಗನಾಯಕಿ ಅಮ್ಮಾಳ್ ತನ್ನ ಸಣ್ಣ ನಿಲುವಿನ ಹೊರತಾಗಿಯೂ ಪ್ರಭಾವಶಾಲಿ ಉಪಸ್ಥಿತಿಯನ್ನು ಹೇಗೆ ಹೊಂದಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಅವರು ಸಂಕೀರ್ಣವಾದ ಲಯದ ಲೆಕ್ಕಾಚಾರಗಳನ್ನು ಸುಲಭವಾಗಿ ಓದಬಲ್ಲವರಾಗಿದ್ದರು. ಅವರಿಗೆ ನಟನೆಗಿಂತ ಕಲಿಸುವುದರಲ್ಲಿಯೇ ಹೆಚ್ಚು ಆಸಕ್ತಿ ಇತ್ತು. ಮೃದಂಗವಲ್ಲದೆ ಭರತನಾಟ್ಯವನ್ನೂ ಕಲಿಸಿದರು.
ರಂಗನಾಯಕಿ ಅಮ್ಮಾಳ್ ಅವರು ತಮ್ಮ ವಿದೇಶಿ ವಿದ್ಯಾರ್ಥಿನಿ ಕ್ಯಾರೋಲಿನ್ ಸೇರಿದಂತೆ ಅವರ ಹಲವಾರು ವಿದ್ಯಾರ್ಥಿಗಳಿಗೆ ಅರಂಗೇಟ್ರಂ ಆಯೋಜಿಸಿದ್ದರು’’ ಎಂಬುದಾಗಿ ತುಂಬು ಹೃದಯದಿಂದ ಸ್ಮರಿಸಿದ್ದಾರೆ. ರಂಗನಾಯಕಿ ಅಮ್ಮಾಳ್ ಅವರು ಸೌದಾಮಿನಿ ರಾವ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದರು.
ತಮ್ಮ ಇಡೀ ಜೀವನವನ್ನು ಮೃದಂಗ ವಾದನ ಮತ್ತು ಭರತನಾಟ್ಯ ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದ ರಂಗನಾಯಕಿ ಅಮ್ಮಾಳ್ ತಮ್ಮ ಎಂಬತ್ತೆಂಟನೆಯ ವಯಸ್ಸಿನಲ್ಲಿ ಅಂದರೆ 1998 ರ ಆಗಸ್ಟ್ ಹದಿನೈದರೆಂದು ನಿಧನರಾದರು. ಅವರ ಹಿರಿಯ ಸಹೋದರಿ ಶಿವ ಬೃಂದಾದೇವಿಯವರ ದತ್ತು ಪುತ್ರ ಹಾಗೂ ದಯಾನಂದ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಚಿಕ್ಕಮ್ಮನ ಬಗ್ಗೆ ಸ್ಮರಿಸಿಕೊಳ್ಳುತ್ತಾ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಅವರು ಮೃದಂಗ ವಾದನ ಪ್ರದರ್ಶನವನ್ನು ನಿಲ್ಲಿಸಿದ್ದರು. ಆದರೆ, ಹದಿನಾಲ್ಕು ವರ್ಷಗಳ ನಂತರ ನನ್ನ ವಿವಾಹದ ಸಂದರ್ಭದಲ್ಲಿ ಪ್ರದರ್ಶನ ನೀಡಿ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದರು ಎಂದು ಅವರ ಮರಣದ ಸಮಯದಲ್ಲಿ ಚಿಕ್ಕಮ್ಮನನ್ನು ನೆನಪಿಸಿಕೊಂಡಿದ್ದರು.
1972 ರಲ್ಲಿ ತಮಿಳು ಸರ್ಕಾರವು ರಂಗನಾಯಕಿ ಅಮ್ಮಾಳ್ ಅವರಿಗೆ ಪ್ರತಿಷ್ಠಿತ ಕಲೈ ಮಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜೊತೆಗೆ ಅವರ ನಿಧನಾನಂತರ ಟಿ.ಎಸ್. ರಂಗನಾಯಕಿ ಅಮ್ಮಾಳ್ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿ, ಪ್ರತಿ ವರ್ಷ ಮೃದಂಗ ವಾದಕರಿಗೆ ನೀಡುತ್ತಾ ಬಂದಿದೆ.
ಜಗದೀಶ್ ಕೊಪ್ಪ.


.

ಬುಧವಾರ, ನವೆಂಬರ್ 1, 2023

ಭೂಮಿ ಎಂಬ ನೆಲದ ಮೇಲಿನ ನರಕ

 


 


ಅಕ್ಟೋಬರ್ ಎರಡನೆಯ ವಾರ ಜಾಗತಿಕ ಹಸಿವಿನ ಸೂಚ್ಯಂಕದ ವರದಿಯು ಬಿಡುಗಡೆಯಾಗಿದೆಜಾಗತಿಕವಾಗಿ 125 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪ್ರಬಲ ಆರ್ಥಿಕ ರಾಷ್ಟ್ರ ಎಂಬ ಹುಸಿ ಖ್ಯಾತಿಯನ್ನು ಹೊಂದಿರುವ ಭಾರತದ ಸ್ಥಾನ 111 ನೇ ಸ್ಥಾನಕ್ಕೆ ಕುಸಿದಿದೆ.ಕಳೆದವರ್ಷ 107ನೇಸ್ಥಾನದಲ್ಲಿದ್ದ ಭಾರತವು ನೆರೆಯ ನೇಪಾಳ ( 69ನೇ ಸ್ಥಾನಬಾಂಗ್ಲಾ(81 ನೇ ಸ್ಥಾನಮತ್ತು ಪಾಕಿಸ್ತಾನ( 102 ನೇ ಸ್ಥಾನ ರಾಷ್ಟ್ರಗಳಿಗಿಂದ ಶೋಚನೀಯ ಸ್ಥಿತಿಯಲ್ಲಿದೆಜಾಗತಿಕವಾಗಿ ಅರ್ಥಶಾಸ್ತ್ರಜ್ಞರ ನೇತೃತ್ವದಲ್ಲಿ ನಡೆಯುವ  ಸಮೀಕ್ಷೆಯನ್ನು ಭಾರತೀಯ ಜನತಾ ಪಕ್ಷದ ವಿರೋಧಿ ಪಕ್ಷಗಳಾದ  ಕಾಂಗ್ರೇಸ್ಸಿ.ಪಿ..( ಎಂ), ತೃಣಮೂಲ ಕಾಂಗ್ರೇಸ್ ಅಥವಾ ಡಿ.ಎಂ.ಕೆ  ಪಕ್ಷ  ಅಥವಾ ಅದರ ಕಾರ್ಯಕರ್ತರು ನಡೆಸುವುದಿಲ್ಲ.

ಜನಸಾಮಾನ್ಯರಿಗೆ ಅರ್ಥವಾಗುವ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯು ಕೇಂದ್ರದಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ಈಗ ಅರ್ಥವಾಗುವುದಿಲ್ಲ. ಹಸಿವು, ಬಡತನ, ಅಪೌಷ್ಟಿಕತೆ, ಶಿಕ್ಷಣ, ಆರೋಗ್ಯ, ನಿರುದ್ಯೋಗ, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲವೂ ಜಾಗತಿಕ ಮಟ್ಟದಲ್ಲಿ ಶೋಚನೀಯ ಸ್ಥಿತಿಯಲ್ಲಿವೆ.  ಸಂಘಪರಿವಾರದ ಪುಂಗಿದಾಸರ ದೃಷ್ಟಿಕೋನದಲ್ಲಿ ವಿಶ್ವಗುರು ಎಂದು ಅವರ ಪಾಲಿಗೆ ಆರಾಧ್ಯ ದೈವವಾಗಿರುವ  ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಯೋಜನೆಗಳನ್ನು ಸಹಿಸಿಕೊಳ್ಳಲಾಗದ ಸಂಸ್ಥೆಗಳು ಬಿಡುಗಡೆ ಮಾಡುವ ಸುಳ್ಳಿನ ಸಮೀಕ್ಷೆ ಎಂಬ ನಂಬಿಕೆ ಬೆಳೆದು ಬಂದಿದೆ. .

ಜಾಗತಿಕ ಬಡತನದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ನಾಲ್ಕು ಕೋಟಿ ಇಪ್ಪತ್ತು ಲಕ್ಷದಷ್ಟು ಜನತೆ ಬಡತನದ ರೇಖೆಯಿಂದ ಹೊರಬಂದಿದ್ದಾರೆ. ಬಡತನದ ಮಾನದಂಡಕ್ಕೆ ಜಾಗತಿಕ ಮಟ್ಟದಲ್ಲಿ ಆಯಾ ಪ್ರಾದೇಶಿಕ ಅಥವಾ ರಾಷ್ಟ್ರಕ್ಕೆ ಅನುಗುಣವಾಗಿ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ. ಭಾರತವೂ ಸೇರಿದಂತೆ ಆಗ್ನೆಯ ಏಷ್ಯಾ ರಾಷ್ಟ್ರಗಳಲ್ಲಿ ದಿನವೊಂದಕ್ಕೆ ಕನಿಷ್ಟ 140 ರೂಪಾಯಿ ಸಂಪಾದಿಸುವ ವ್ಯಕ್ತಿಯನ್ನು  ಬಡತನದ ರೇಖೆ ದಾಟಿದ್ದಾನೆ ಎಂದು ಹೇಳಲಾಗುತ್ತದೆ. ಆದರೆ, 2020 ರಲ್ಲಿ ಜಗತ್ತಿನಾದ್ಯಂತ ಸಂಭವಿಸಿದ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬಡತನ ವ್ಯಾಖ್ಯಾನ ಬದಲಾಗಿದೆ. ಅವಶ್ಯಕ ವಸ್ತುಗಳ ಬೆಲೆಗಳು ವಿಶೇಷವಾಗಿ ಅಕ್ಕಿ,ಬೇಳೆ, ಗೋಧಿ, ತರಕಾರಿ ಹಾಗೂ ಅಡುಗೆ ಎಣ್ಣೆ ಬೆಲೆಗಳು ಗಗನಕ್ಕೇರಿವೆ ಈ ಸ್ಥಿತಿಯಲ್ಲಿ ದಿನದ 140 ರೂಪಾಯಿಗಳ  ಸಂಪಾದನೆಯಲ್ಲಿ ಕೂಲಿಕಾರನ ಒಂದು ಸಣ್ಣ ಕುಟುಂಬ ಜೀವಿಸಬಹುದು ಎಂಬುದು ನಗೆಪಾಟಲಿನ ಸಂಗತಿ.

ಈ ಕಾರಣದಿಂದಾಗಿ ಇತ್ತೀಚೆಗಿನ ವರದಿಯ ಪ್ರಕಾರ ಭಾರತದ ಜನಸಂಖ್ಯೆಯ ಶೇಕಡ 22 ರಷ್ಟು ಅಂದರೆ, ಸುಮಾರು 44 ಕೋಟಿ ಜನರು ಬಡತನದಿಂದ ನರಳುತ್ತಿದ್ದಾರೆ. ಇದು ವಾಸ್ತವಕ್ಕೆ ತೀರಾ ಹತ್ತಿರವಾಗಿದೆ.  ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇಕಡಾ 18.7 ರಷ್ಟಿದೆ. ಭಾರತದಲ್ಲಿ ವರ್ಷವೊಂದಕ್ಕೆ ಹನ್ನೆರೆಡು ತಿಂಗಳು ತುಂಬುವ ಮುನ್ನವೇ ಐದರಿಂದ ಎಂಟು ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದರೆ, ಹೆರಿಗೆ ಸಮಯದಲ್ಲಿ ಒಂದೂವರೆ ಲಕ್ಷ ತಾಯಂದಿರು ಮರಣವನ್ನಪ್ಪುತ್ತಿದ್ದಾರೆ. ಇದು ನಮ್ಮ ಕಣ್ಣೆದುರುಗಿನ ನೈಜ ಭಾರತದ ಸ್ಥಿತಿ.

ಮನುಕುಲದ ಕಾಳಜಿಯನ್ನು ತಮ್ಮ ಬದುಕಿನ ಮುಖ್ಯ ಗುರಿಯಾಗಿರಿಸಿಕೊಂಡಿರುವ ಜಗತ್ತಿನ ಹಲವಾರು ರಾಷ್ಟ್ರಗಳ ಆರ್ಥಿಕ ತಜ್ಞರು, ಹವಾಮಾನ ತಜ್ಞರು ಮತ್ತು ಆರೋಗ್ಯ ತಜ್ಞರು ಹೀಗೆ ಹಲವು ರಂಗಗಳ ನಿಪುಣರು 2020 ರಲ್ಲಿ ಕ್ಲಬ್ ಆಪ್ ರೋಮನ್ ಎಂಬ ಸಂಘಟನೆಯನ್ನು ರಚಿಸಿಕೊಂಡು, ಈ ಆಧುನಿಕ ಜಗತ್ತು ಸಾಗುತ್ತಿರುವ ಆತ್ಮಹತ್ಯೆಯ ಮಾರ್ಗವನ್ನು ವಿಶ್ಲೇಷಣೆಯ ಮೂಲಕ ನಮ್ಮ ಮುಂದಿಟ್ಟಿದ್ದಾರೆ. ಸತತ ಮೂರು ವರ್ಷಗಳ ಕಾಲ ಅಮೇರಿಕಾ, ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳ ತಜ್ಞರು ಸಭೆ ಸೇರಿ ಹಲವಾರು ವಾದ, ಸಂವಾದಗಳ ಮೂಲಕ ಒಂದು ವರದಿಯನ್ನು ಸಿದ್ಧಪಡಿಸಿದ್ದಾರೆ. 2022 ರ ಸೆಪ್ಟಂಬರ್ ನಲ್ಲಿ ಸಿದ್ಧವಾದ ಈ ವರದಿ 2023 ರ ಮಾರ್ಚ್ ತಿಂಗಳಿನಿಂದ ಜಗತ್ತಿನಾದ್ಯಂತ ಪುಸ್ತಕ ರೂಪದಲ್ಲಿ ಎಲ್ಲರಿಗೂ ದೊರೆತಿದೆ. ‘’ಭೂಮಿ ಎಲ್ಲರಿಗಾಗಿ; ಬದುಕುಳಿಯುವ ಮಾನವೀಯತೆಗಾಗಿ ಮಾರ್ಗದರ್ಶನ’’ ( ಅರ್ಥ್ ಫಾರ್ ಎವರಿಬಡಿ: ದ ಸರ್ವವೈಲ್  ಗೈಡ್ ಫಾರ್ ಹುಮ್ಯಾನಿಟಿ) ಎಂಬ ಶೀರ್ಷಿಕೆಯ 208 ಪುಟಗಳ ಈ ವರದಿಯನ್ನು ಭಾರತದ ಅರ್ಥಶಾಸ್ತ್ರಜ್ಞೆಜಯತಿ ಘೋಷ್ ಸೇರಿದಂತೆ ( ಇವರು ದೆಹಲಿಯ ಜವಹರಲಾಲ್ ವಿ.ವಿ.ಯಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರದ ಮುಖ್ಯಸ್ಥೆಯಾಗಿದ್ದರು) ಆರು ಮಂದಿ ತಜ್ಞರು  ರಚಿಸಿದ್ದಾರೆ.

ಕೈಗಾರಿಕೆಯ ಕ್ರಾಂತಿಯ ನಂತರ ಮುನ್ನೆಲೆಗೆ ಬಂದ ಬಂಡವಾಳ ಶಾಹಿ ವ್ಯವಸ್ಥೆಯು ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಅವತಾರಗಳನ್ನುತಾಳಿತು.   1990 ರಲ್ಲಿ ಜಾಗತೀಕರಣ ಹೆಸರಿನಲ್ಲಿ ತಲೆ ಎತ್ತಿದ ಬಂಡವಾಳ ಶಾಹಿ ವ್ಯವಸ್ಥೆ ಜಗತ್ತಿನಾದ್ಯಂತ ಶ್ರೀಮಂತರನ್ನ ಸೃಷ್ಟಿಸುತ್ತಿರುವ ಇತಿಹಾಸವನ್ನು ಸಹ ಈ ವರದಿ ಒಳಗೊಂಡಿದೆ. ಕಾರ್ಪೋರೇಟ್ ಹೆಸರಿನಲ್ಲಿ ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರಗಳನ್ನ ತಮ್ಮ ಹಣದ ಥೈಲಿಯಿಂದ ಕುಣಿಸುತ್ತಿರುವ ಶ್ರೀಮಂತರು ಇಂದು ಜಗತ್ತಿನಲ್ಲಿ ಕೇವಲ ಶೇಕಡಾ ಐದರಷ್ಟು ಮಂದಿ ಮಾತ್ರ ಇದ್ದಾರೆ. ಆದರೆ, ಇವರು  ಜಗತ್ತಿನ ಪಾಕೃತಿಕ ಕೊಡುಗೆಗಳನ್ನು ಶೇಕಡಾ 95 ರಷ್ಟುನ್ನು ಬಳಸುತ್ತಿದ್ದಾರೆ. ಈ ಭೂಮಿಯ ಪ್ರತಿಯೊಂದು ಜೀವಿಗೂ ಪುಕ್ಕಟೆಯಾಗಿ ದೊರೆಯಬೇಕಿದ್ದ ನೀರು, ಗಾಳಿ, ಎಲ್ಲವೂ  ಈಗ ಕಲುಷಿತಗೊಂಡಿವೆ.

ಜಗತ್ತಿನಾದ್ಯಂತ ರಾಷ್ಟ್ರಗಳು ಜಾಗತೀಕರಣ ವ್ಯವಸ್ಥೆಗೆ ತೆರೆದುಕೊಂಡ ನಂತರ ಸರ್ಕಾರದಿಂದ ದೊರೆಯಬೇಕಾದ ಮೂಲಭೂತ ಅವಶ್ಯಕತೆಗಳು ಎನಿಸಿಕೊಂಡ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಎಲ್ಲವುಗಳಿಂದ ನಾಗರೀಕರು  ವಂಚಿತರಾಗಿದ್ದಾರೆ.  ಈ ಎಲ್ಲಾ ಕ್ಷೇತ್ರಗಳು ಉಳ್ಳವರು ಅಥವಾ ಉದ್ಯಮಿಗಳ ಪಾಲಾಗಿವೆ.  ಕಾರ್ಖಾನೆ ಅಥವಾ ಇತರೆ ಉದ್ದಿಮೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಈಗ ಸಂಘಟಿತರಾಗುವುದು ಅಪರಾಧ ಎಂಬಂತಾಗಿದೆ. ಅವರುಗಳ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲ. ದುಡಿಮೆಯ ಅವಧಿಯನ್ನು ಎಂಟು ಗಂಟೆಯಿಂದ ಹನ್ನೆರೆಡು ಗಂಟೆಗೆ ಅವಧಿಗೆ ವಿಸ್ತರಿಸುವ ಯೋಜನೆ ಜಾರಿಯಲ್ಲಿದೆ. ಲಿಂಗ ಅಸಮಾನತೆಯ  ನಡುವೆ ಈ ನೆಲದ ಮೇಲಿನ ಹೆಣ್ಣು ಜೀವಕ್ಕೆ ಇನ್ನೂ ಬಿಡುಗಡೆ ದೊರೆತಿಲ್ಲ. ಹವಾಮಾನ ಬದಲಾವಣೆ ಏಕಕಾಲಕ್ಕೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.

ಬಡತನದ ಕಾರಣಗಳು ರಾಷ್ಟ್ರ , ಪ್ರದೇಶ ಮತ್ತು ಜಾಗತಿಕ ಮಟ್ಟದಲ್ಲಿ ಇತರ ರಾಷ್ಟ್ರಗಳಿಗೆ ಹೋಲಿಸಿದಾಗ  ಬದಲಾವಣೆಗಳನ್ನು ನಾವು ಕಾಣಬಹುದು  ಆದರೂ ಸಹ ಹಲವು ಕಾರಣಗಳಲ್ಲಿ ಸಾಮಾನ್ಯತೆ ಇದೆ. ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೂಕ್ಷ್ಮ ಮತ್ತು ಸ್ಥೂಲ ಮಟ್ಟದಲ್ಲಿ ಕೆಲವು ಅಂಶಗಳನ್ನು ಒಳಗೊಂಡಂತೆ ತಾತ್ವಿಕ ದೃಷ್ಟಿಕೋನಗಳು ಮತ್ತು ವಿಶೇಷವಾಗಿ ಐತಿಹಾಸಿಕ ದೃಷ್ಟಿಕೋನಗಳನ್ನು ನಾವು  ಪರಿಗಣಿಸಬಹುದು.

ಈ ಜಗತ್ತಿನ ಬಹುತೇಕ ಕಡೆ ಭೂಮಿಯಲ್ಲಿ ದುಡಿದು ತಿನ್ನುತ್ತಿದ್ದ ರೈತನಿಗೆ ಫಸಲು ಕೈಗೆ ಸಿಗುತ್ತದೆ ಎಂಬ ಭರವಸೆಯಿಲ್ಲ. ಕೃಷಿಯನ್ನು ನಂಬಿಕೊಂಡಿದ್ದ ಲಕ್ಷಾಂತರ ಕೂಲಿಕಾರ್ಮಿಕರು ಉದ್ಯೋಗ ಅರೆಸಿಕೊಂಡು ನಗರದತ್ತ ವಲಸೆ ಹೋಗುತ್ತಿದ್ದಾರೆ. ಶುದ್ಧವಾದ ಕುಡಿಯುವ ನೀರು, ವಸತಿ, ಶೌಚಾಲಯ ಇಲ್ಲದ ವ್ಯವಸ್ಥೆಯೊಳಗೆ ಕೊಳಚೆಗೇರಿ ಎಂಬ ಹಂದಿಗೂಡಿನಂತ ಪುಟ್ಟ ಗುಡಿಸಲಿನಲ್ಲಿ ಬದುಕುತ್ತಾ ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ವಿದ್ಯತ್ ಇಲ್ಲದ ಕಾರಣ ನಲವತ್ತೈದು ಡಿಗ್ರಿ ಉಷ್ಣಾಂಷದಲ್ಲಿ ಮಲಗುತ್ತಾ, ಸೊಳ್ಳೆಗಳಿಂದ ಕಡಿಸಿಕೊಳ್ಳುತ್ತಾ, ಖಾಸಾಗಿ ಆಸ್ಪತ್ರೆಗಳ ಶುಲ್ಕ ಭರಿಸಲಾಗದೆ ತಮ್ಮ ಮಕ್ಕಳ ಹಾಗೂ ತಮ್ಮ ಜೀವಗಳನ್ನು ಆಧುನಿಕ ಜಗತ್ತಿನ ಭರಾಟೆಗೆ ಬಲಿ ಕೊಡುತ್ತಿದ್ದಾರೆ. ಈಗ ಮರಣ ಹೊಂದಿದವರ ಬಗ್ಗೆ ಯೋಚಿಸುವ ವ್ಯವಧಾನ ಈ ಜಗತ್ತಿಗೆ ಇಲ್ಲವಾಗಿದೆ. ಈಗ ಏನಿದ್ದರೂ ಕಾಸಿದ್ದವನಿಗೆ ಮತ್ತು ಬದುಕುವ ಕಲೆ ಗೊತ್ತಿದ್ದವನಿಗೆ ಮಾತ್ರ ಈ ಜಗತ್ತು ಎಂಬ ನಂಬಿಕೆ ಬಲವಾಗುತ್ತಿದೆ. ಕಡಿಮೆ ಶುದ್ಧ ಗಾಳಿ, ಸೀಮಿತ ಕುಡಿಯುವ ನೀರು ಮತ್ತು ಕಳಪೆ ನೈರ್ಮಲ್ಯವನ್ನು ಸೃಷ್ಟಿಸುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿರುವ ಆಧುನಿಕ  ಜಗತ್ತಿನಲ್ಲಿ ಬಡ ಸಮುದಾಯಗಳು ಹೆಚ್ಚು ಬಳಲುತ್ತಿದ್ದಾರೆ

ಬಡತನದ ಕಾರಣಗಳ ಮೇಲೆ ವರ್ತನೆಯ, ರಚನಾತ್ಮಕ ಮತ್ತು ರಾಜಕೀಯ ಸಿದ್ಧಾಂತಗಳಿವೆ: "ನಡವಳಿಕೆಯ ಸಿದ್ಧಾಂತಗಳು ಪ್ರೋತ್ಸಾಹ ಮತ್ತು ಸಂಸ್ಕೃತಿಯಿಂದ ನಡೆಸಲ್ಪಡುವ ವೈಯಕ್ತಿಕ ನಡವಳಿಕೆಗಳ ಮೇಲೆ ಕೇಂದ್ರೀಕರಿಸುತ್ತವೆ. ರಚನಾತ್ಮಕ ಸಿದ್ಧಾಂತಗಳು ಜನಸಂಖ್ಯಾ ಮತ್ತು ಕಾರ್ಮಿಕ ಮಾರುಕಟ್ಟೆ ಸಂದರ್ಭವನ್ನು ಒತ್ತಿಹೇಳುತ್ತವೆ, ಇದು ನಡವಳಿಕೆ ಮತ್ತು ಬಡತನ ಎರಡನ್ನೂ ಉಂಟುಮಾಡುತ್ತದೆ. ರಾಜಕೀಯ ಸಿದ್ಧಾಂತಗಳು ಆ ಶಕ್ತಿಯನ್ನು ಪ್ರತಿಪಾದಿಸುತ್ತವೆ. ಮತ್ತು ಸಂಸ್ಥೆಗಳು ನೀತಿಯನ್ನು ಉಂಟುಮಾಡುತ್ತವೆ, ಇದು ಪರೋಕ್ಷವಾಗಿ  ಬಡತನವನ್ನು ಸೃಷ್ಟಿ ಮಾಡುತ್ತದೆ .

ತಾತ್ವಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ,   ಸಮಾಜವಾದಿ ದೃಷ್ಟಿಕೋನವು ಬಡತನವನ್ನು ಬಂಡವಾಳ, ಸಂಪತ್ತು ಮತ್ತು ಸಂಪನ್ಮೂಲಗಳ ಅಸಮರ್ಪಕ ಹಂಚಿಕೆಗೆ ಕಾರಣವೆಂದು ಹೇಳುತ್ತದೆ, ಅದು "ಶ್ರೀಮಂತ ಗಣ್ಯರು" ಅಥವಾ "ಹಣಕಾಸಿನ ಶ್ರೀಮಂತರು" ಮತ್ತು ದೊಡ್ಡ ಸಮುದಾಯದ ಹಿತಾಸಕ್ತಿಗಳನ್ನು ಬೆಂಬಲಿಸುತ್ತದೆ. ಸಮಾಜವಾದಿ ಸಂಪ್ರದಾಯವು ಬಡತನಕ್ಕೆ ಪರಿಹಾರವಾಗಿ ಸಂಪತ್ತಿನ ಮರು-ಹಂಚಿಕೆಗೆ ಒತ್ತಾಯಿಸುತ್ತದೆ. ಮೂಲಭೂತವಾಗಿ, "ಆರ್ಥಿಕತೆಯ ಪ್ರಮುಖ ಮಾನದಂಡಗಳನ್ನು" ಖಾಸಗೀಕರಣಗೊಳಿಸಬೇಕು ಮತ್ತು ದುಡಿಯುವ ಸಮುದಾಯ-ವರ್ಗಕ್ಕೆ ಹಂಚಬೇಕು, ಅದು "ಶ್ರೀಮಂತ ಗಣ್ಯರ ಬದಲಿಗೆ ಸಾಮಾನ್ಯ ಜನರ ಹಿತಾಸಕ್ತಿಗಳನ್ನ ಪರಿಗಣಿಸಬೇಕು ಎಂಬುದು ಸಮಾಜವಾದಿ ಆರ್ಥಿಕ ದೃಷ್ಟಿಕೋನದ ತಿರುಳಾಗಿದೆ.

ಮಾರ್ಕ್ಸ್‌ವಾದಿ ಸಿದ್ಧಾಂತದ ಪ್ರಕಾರ, ವರ್ಗ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಅಸಮಾನತೆಯು ಬಡತನವನ್ನು ಪೋಷಿಸುತ್ತದೆ; ಎರಡೂ ಘಟಕಗಳು "ಬಂಡವಾಳಶಾಹಿ ಉತ್ಪಾದನಾ ವಿಧಾನ" ದಿಂದ "ಅಸಮಾನತಾವಾದಿ ಸಾಮಾಜಿಕ ರಚನೆಗಳಿಗೆ" ಬಂಡವಾಳಶಾಹಿ ವ್ಯವಸ್ಥೆ ಕೊಡುಗೆ ನೀಡುತ್ತವೆ. ಮಾರ್ಕ್ಸ್‌ವಾದಿಗಳು ಸಮಾಜದ ರಚನಾತ್ಮಕ ಸ್ವರೂಪವನ್ನು (ಬಡತನಕ್ಕೆ ಕಾರಣ) ಸಮಾಜದಲ್ಲಿನ ಬಡತನವನ್ನು ನಿವಾರಿಸಲು ಬದಲಾಯಿಸಬೇಕೆಂದು ನಂಬುತ್ತಾರೆ. .

ಐತಿಹಾಸಿಕ ದೃಷ್ಟಿಕೋನದಿಂದ ಬಡತನದ ಕೆಲವು ಪ್ರಮುಖ ಕಾರಣಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:

ಆಸ್ತಿ ಮಾಲೀಕತ್ವದಲ್ಲಿ ಹೂಡಿಕೆ ಮಾಡಲು ಬಡ ಕುಟುಂಬಗಳ ಅಸಮರ್ಥತೆ. ಸೀಮಿತ ಹಾಗೂ ಕಳಪೆ ಗುಣಮಟ್ಟದ  ಶಿಕ್ಷಣವು ಕಡಿಮೆ ಅವಕಾಶಗಳಿಗೆ ಕಾರಣವಾಗುತ್ತದೆ. ಸಾಲಗಳ ವಿತರಣೆಯಲ್ಲಿ ಸೀಮಿತ ಅವಕಾಶ ಕೂಡ ಬಡತನಕ್ಕೆ ಕಾರಣವಾಗಿದೆ., ಕೆಲವು ಸಂದರ್ಭಗಳಲ್ಲಿ-ಅನುವಂಶಿಕ ಬಡತನವು ಸಹ  ಮೂಲಕ ಹೆಚ್ಚು ಬಡತನವನ್ನು ಸೃಷ್ಟಿಸುತ್ತದೆ. ಜನಾಂಗೀಯ ಅಲ್ಪಸಂಖ್ಯಾತರು, ಜನಾಂಗೀಯ ಜಾತಿಗಳು, ಬುಡಕಟ್ಟುಗಳು, ಮಹಿಳೆಯರು ಮತ್ತು ವಿಕಲಚೇತನರು ನ್ಯಾಯಯುತ ಆರ್ಥಿಕ ಉದ್ಯಮದಲ್ಲಿ ಭಾಗವಹಿಸುವುದರಿಂದ ಮತ್ತು ಸಂಸ್ಥೆಗಳು/ಮಾರುಕಟ್ಟೆಗಳಿಗೆ ಪ್ರವೇಶವನ್ನು ವ್ಯವಸ್ಥಿತವಾಗಿ ಹೊರಗಿಡುವುದು. ಈ ಹೊರಗಿಡುವಿಕೆಯು ಬಡತನದ ಚಕ್ರ ಮತ್ತು ನಿರಂತರತೆಯನ್ನು ಸೃಷ್ಟಿಸಿತು . ಇವುಗಳ ಜೊತೆಗೆ ಯುದ್ಧ, ಅಪರಾಧ ಮತ್ತು ಹಿಂಸಾಚಾರಗಳು ಬಡತನಕ್ಕೆ ಕೆಲವು ಪ್ರಾಥಮಿಕ ಕಾರಣಗಳಾಗಿವೆ.  ಕಳೆದ ಎರಡು ದಶಕಗಳ್ಲಿ ಹಲವಾರು  ರಾಷ್ಟ್ರಗಳಲ್ಲಿ  ರಾಜಕೀಯ ಹಿಂಸಾಚಾರ ಮತ್ತು ಸಂಘಟಿತ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ.  ಇದರ ಪರಿಣಾಮವಾಗಿ ಯುದ್ಧ, ಅಪರಾಧ ಮತ್ತು ಹಿಂಸಾಚಾರದ  ರಾಷ್ಟ್ರಗಳಲ್ಲಿ ಬಡತನದ ಮಟ್ಟವು ಎರಡು ಪಟ್ಟು ಹೆಚ್ಚಾಗಿದೆ.  ಹವಾಮಾನ ಬದಲಾವಣೆಯು ವಿಶೇಷವಾಗಿ ಹೆಚ್ಚು ಸಾಲ ಮಾಡಿರುವ  ರಾಷ್ಟ್ರಗಳಲ್ಲಿ: ಕೃಷಿ ಮತ್ತು ಆಹಾರ ಮೂಲಗಳನ್ನು ಮಿತಿಗೊಳಿಸುತ್ತದೆ.  ಬಡ ರಾಷ್ಟ್ರಗಳಲ್ಲಿ, ಸೀಮಿತ ಕೃಷಿ ಉತ್ಪನ್ನಗಳು/ಆಹಾರ ಉಳಿವಿಕೆಯ  ಸಂಪನ್ಮೂಲಗಳನ್ನು ತಗ್ಗಿಸುತ್ತದೆ,

ಹೆಚ್ಚು ಅಗತ್ಯ ಹಸ್ತಕ್ಷೇಪವಿಲ್ಲದೆ, ಹವಾಮಾನ ಬದಲಾವಣೆಯು 2030 ರ ಅಂತ್ಯದ  ವೇಳೆಗೆ ವಿಶ್ವದಾದ್ಯಂತ ಹತ್ತು ಕೋಟಿಗೂ  ಹೆಚ್ಚು ಜನರನ್ನು ಬಡತನಕ್ಕೆ ದೂಡಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. 2050 ರ ಹೊತ್ತಿಗೆ, ಲ್ಯಾಟಿನ್ ಅಮೇರಿಕಾ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಂತಹ ಪ್ರಾದೇಶಿಕ ಪ್ರದೇಶಗಳು ಅಂತ್ಯದ ಅಪಾಯಕಾರಿ ಸ್ಥಿತಿ ತಲುಪಿವೆ ಎಂದು ತಜ್ಞರು ಊಹಿಸಿದ್ದಾರೆ.  ಇವುಗಳ ಒಟ್ಟು ಪರಿಣಾಮವನ್ನು  ಈ ಭೂಮಿಯ ಮೇಲಿ ನ ಮಹಿಳೆಯರು ಮತ್ತು ಮಕ್ಕಳು ಅನುಭವಿಸಬೇಕಾಗಿದೆ. ಹಾಗಾಗಿ ಈಗ ಭೂಮಿಯೆಂಬುದು ಉಳ್ಳವರ ಪಾಲಿಗೆ ಸ್ವರ್ಗವಾಗಿ ಇಲ್ಲದವರ ಪಾಲಿಗೆ ನರಕವಾಗಿ ಮಾರ್ಪಟ್ಟಿದೆ.

ಚಿತ್ರ ಸೌಜನ್ಯ- ಉದಯ್ ಭಾನ್.

( ನವಂಬರ್  ಹೊಸತು  ಮಾಸಪತ್ರಿಕೆಯಲ್ಲಿ ಪ್ರಕಟವಾದ  ಬಹುಸಂಸ್ಕೃತಿ ಹೆಸರಿನ ಅಂಕಣ ಬರಹ)

ಡಾ.ಎನ್. ಜಗದೀಶ್ ಕೊಪ್ಪ